ಮಡಿಕೇರಿ : 2026ರ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿಕಾಂ ವಾಣಿಜ್ಯ ಸಿರಿ ಪಠ್ಯ ಪುಸ್ತಕಕ್ಕೆ ಕೊಡಗಿನ ರಮ್ಯ ಮೂರ್ನಾಡು ಅವರು ಬರೆದಿರುವ ಕವಿತೆ ಆಯ್ಕೆಯಾಗಿದೆ.
ಮಡಿಕೇರಿ ತಾಲೂಕಿನ ಮೂರ್ನಾಡು ನಿವಾಸಿಯಾದ ರಮ್ಯಾ, ಪ್ರಸ್ತುತ ಎಮ್ಮೆಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಬರೆದಿರುವ ʼಹೇಳಲು ನನಗೂ ಒಂದು ಕತೆಯಿದೆʼ ಕವನವನ್ನು ವಾಣಿಜ್ಯ ಸಿರಿ ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದೆ.
ಓದು, ಬರಹ, ಚಾರಣ ಹವ್ಯಾಸವಿರುವ ಇವರು ಈಗ ಯುವ ಕವಯತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಪ್ರಕಟಿತ ಕವನ ಸಂಕಲನ “ದಾಹಗಳ ಮೈ ಸವರುತ್ತಾ” ಕೃತಿಗೆ 2023-24 ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಸಿಕ್ಕಿದೆ. ʼಅಮ್ಮಾ ಚೂರು ನಿಟಿಕೆ ಮುರಿಯೇʼ ಎಂಬ ಮಕ್ಕಳ ಕವನಗಳ ಸಂಕಲನ, ʼಗಾಳಿಯಾಡುತ್ತಿರಲಿ ಗಾಯʼ ಎಂಬ ಕವನ ಸಂಕಲನ ಪ್ರಕಟವಾಗಿವೆ. ʼಬೆನ್ನ ಹಾದಿಯ ಚಿಟ್ಟೆʼ ಎಂಬ ಗಜಲ್ ಸಂಕಲನ ಪ್ರಕಟಣೆ ಹಂತದಲ್ಲಿವೆ.
2025-26 ನೇ ಸಾಲಿನಲ್ಲಿ SSK ಸಹಭಾಗಿತ್ವದಲ್ಲಿ ನಡೆದ ʼರೂಂ ಟು ರೀಡ್ʼ ಯೋಜನೆಯಡಿಯಲ್ಲಿ ಮಕ್ಕಳ ಚಿತ್ರಕತೆ ಮಾಲಿಕೆಗೆ ಅಡುಗೆ ಕಾಂತಮ್ಮ ಟೀಚರ್ ಆದ್ರು ಎಂಬ ಚಿತ್ರಕತೆಯನ್ನು ರಚಿಸಿಕೊಟ್ಟಿರುತ್ತಾರೆ.
ಗುರುವಪ್ಪ ಕೆ.ಟಿ. ಹಾಗೂ ಬೇಬಿ ಕೆ.ಜಿ. ದಂಪತಿಯ ಪುತ್ರಿಯಾಗಿರುವ ರಮ್ಯಾ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.



