ಮಡಿಕೇರಿ : ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ವಯೋನಿವೃತ್ತಿ ಬಳಿಕ ಒಂದು ವರ್ಷ ಕಾಲ ಸ್ವಇಚ್ಛೆಯಿಂದ ತನ್ನ ಸೇವೆಯನ್ನು ನೀಡುವ ಮಹತ್ವ ನಿರ್ಧಾರ ಕೈಗೊಳ್ಳುವ ಮೂಲಕ ಮಾದರಿ ನಡೆ ತೋರಿದ್ದಾರೆ.
ಮಡಿಕೇರಿ ತಾಲೂಕಿನ ಕ್ಲೋಸ್ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಎಂ.ಟಿ. ಲಕ್ಷ್ಮೀ ಈ ಮಾದರಿ ನಿರ್ಧಾರ ತೆಗೆದುಕೊಂಡವರು. 32 ವರ್ಷ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಅವರು ಮೇ 30ಕ್ಕೆ ವಯೋನಿವೃತ್ತಿಯಾದರು. ಈ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ವೇಳೆ ಸಹಶಿಕ್ಷಕರು, ಎಸ್ಡಿಎಂಸಿ, ಹಳೆ ವಿದ್ಯಾರ್ಥಿಗಳು ಉಡುಗೊರೆ ನೀಡಿ, ಫಲ ತಾಂಬೂಲ ನೀಡಿ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ, 1994ರಲ್ಲಿ ಆರಂಭಿಸಿ ಶಿಕ್ಷಕ ವೃತ್ತಿ ವಿವಿಧ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಈ ಅವಧಿಯಲ್ಲಿ ಸಹಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ನನಗೆ ಸಹಕರಿಸಿದ್ದಾರೆ. ಮಕ್ಕಳೊಂದಿಗೆ ಬೆರೆತು ಪಠ್ಯ ಚಟುವಟಿಕೆಯನ್ನು ಕಲಿಸುವುದನ್ನು ಆರಂಭದಿಂದಲೇ ಮೈಗೂಡಿಸಿಕೊಂಡಿದ್ದೆ. ಇಂದಿನವರೆಗೂ ಅದನ್ನೇ ಮುಂದುವರೆಕೊಂಡು ಬಂದಿದ್ದೇನೆ ಎಂದರು.
ಕ್ಲೋಸ್ಬರ್ನ್ ಶಾಲೆಯಲ್ಲಿ ಈ ಮೊದಲು ಕೂಡಾ ಕಾರ್ಯನಿರ್ವಹಿಸಿ ಬೇರೆಡೆ ವರ್ಗವಾಗಿದ್ದೆ. ನಿವೃತ್ತಿಗೆ 06 ತಿಂಗಳು ಮುನ್ನ ವರ್ಗಾವಣೆ ಅವಕಾಶ ಎದುರಾದಾಗ ಕ್ಲೋಸ್ಬರ್ನ್ ಶಾಲೆಯನ್ನೇ ಆಯ್ಕೆ ಮಾಡಿಕೊಂಡೆ. ನಿವೃತ್ತಿ ನಂತರ ಪಠ್ಯ, ಪಠ್ಯೇತರ ಚಟುವಟಿಕೆ ನಡೆಸಲು ಶಿಕ್ಷಕರಿಗೆ ಹೊರೆಯಾಗಬಾರದು, ಮಕ್ಕಳಿಗೂ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಮುಂದಿನ ಒಂದು ವರ್ಷ ಕಾಲ ಸ್ವಯಂ ಆಸಕ್ತಿಯಿಂದ ಬಂದು ತನ್ನ ಸೇವೆ ನೀಡುವುದಾಗಿ ಪ್ರಕಟಿಸಿದರು.
ಸಹಶಿಕ್ಷಕಿ ಉಷಾ ಮಾತನಾಡಿ, ನಲಿ-ಕಲಿ ಚಟುವಟಿಕೆಯಲ್ಲಿ ಲಕ್ಷ್ಮೀ ಟೀಚರ್ ರೀತಿ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಿದ್ದವರು ಬೇರೊಬ್ಬರಿಲ್ಲ. ಸರ್ಕಾರದ ನಿಯಮ ಪ್ರಕಾರ ಸಮಯ ಬಂದಾಗ ನಿವೃತ್ತಿಯಾಗಲೇಬೇಕು. ಆದರೆ ಮುಂದಿನ ಒಂದು ವರ್ಷ ಇವರು ಶಾಲೆಗೆ ಸೇವೆ ನೀಡಲು ಮನಸ್ಸು ಮಾಡಿದ್ದು ಅವರ ದೊಡ್ಡ ಗುಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೋರ್ವ ಶಿಕ್ಷಕಿ ಡಿ.ಎಂ. ಸುಜಾತ ಮಾತನಾಡಿ, ಲಕ್ಷ್ಮೀ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಹಳೆ ವಿದ್ಯಾರ್ಥಿ ಕಿಶೋರ್ ರೈ ಕತ್ತಲೆಕಾಡು ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವಕಾಶ ಕಲ್ಪಿಸುವ ಮೂಲಕ ಮುನ್ನೆಲೆಗೆ ತರುತ್ತಿದ್ದರು. ಇವರ ಶ್ರಮ, ಕೊಡುಗೆಯ ಫಲವಾಗಿ ಇಂದು ಅನೇಕ ಮಂದಿ ಸಮಾಜದ ವಿವಿಧ ಸ್ತರಗಳಲ್ಲಿ ಗೌರವದ ಜೀವನ ನಡೆಸುತ್ತಿದ್ದಾರೆಂದು ಸ್ಮರಿಸಿದರು.
ಶಾಲೆ ವಿದಾರ್ಥಿಗಳು ಪ್ರಾರ್ಥಿಸಿದರು. ಲಕ್ಷ್ಮೀ ಅವರ ಪರಿಚಯವನ್ನು ಶಿಕ್ಷಕಿ ಜೆಸ್ಸಿ ಓದಿದರು. ಶಿಕ್ಷಕಿ ಪ್ರಜ್ಞಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ, ಉಪಾಧ್ಯಕ್ಷೆ ಜಯಶ್ರೀ, ಪೋಷಕರು, ಶಾಲೆಯ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.



