ಪೊನ್ನಂಪೇಟೆ : ದಕ್ಷಿಣ ಕೊಡಗಿನ ಕುತ್ತ್ನಾಡಿನ ಕುಟ್ಟಂದಿ ಗ್ರಾಮದ ಕೊಡಕೇರಿಯಲ್ಲಿ ಮಲೆಯಚ್ಚ (ಮಚ್ಚಂಗಾಡ್ ದೇವ) ಎಂದೇ ಖ್ಯಾತಿಯಾಗಿರುವ ಸುಮಾರು 700 ವರ್ಷಗಳ ಪುರಾತನ ಶ್ರೀ ಅಯ್ಯಪ್ಪ ದೇವಸ್ಥಾನ ಕಾಲದ ಹೊಡೆತಕ್ಕೆ ಸಿಲುಕಿ 500 ವರ್ಷಗಳಿಂದ ಪೂಜೆ-ಪುನಸ್ಕಾರಗಳಿಲ್ಲದೆ ಪಾಳು ಬಿದ್ದಿದೆ.
ಒಂದು ಕಾಲದಲ್ಲಿ ಮಂಗಳಘೋಷದಿಂದ ಕಂಗೊಳಿಸುತ್ತಿದ್ದ ಈ ಪುಣ್ಯಕ್ಷೇತ್ರ ಇಂದು ನಿಶ್ಯಬ್ದವಾಗಿದೆ. ಈ ದೇವಸ್ಥಾನ ಕೇವಲ ಕಲ್ಲು-ಮಣ್ಣಿನ ರಚನೆಯಲ್ಲ. ಪೂರ್ವಜರ ನಂಬಿಕೆ, ಶ್ರದ್ಧೆ ಹಾಗೂ ಭಾವೈಕ್ಯದ ಪ್ರತೀಕವಾಗಿದೆ.
ಈ ಹಿನ್ನೆಲೆಯಲ್ಲಿ ಕೊಡಕೇರಿ-ಕುಟ್ಟಂದಿ ಗ್ರಾಮ ಸಮಿತಿ ಮತ್ತು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿದೆ. ಶಾಸ್ತ್ರೋಕ್ತವಾಗಿ ಗರ್ಭಗುಡಿ, ಪ್ರಾಕಾರ, ರಾಜಗೋಪುರ ಹಾಗೂ ಸುತ್ತಲಿನ ಆವರಣವನ್ನು ಪುನರ್ ನಿರ್ಮಿಸಲು ಅಂದಾಜು ರೂ. 45 ಲಕ್ಷ ವೆಚ್ಚ ತಗಲಲಿದೆ ಎಂದು ಸಮಿತಿ ಮಾಹಿತಿ ನೀಡಿದೆ.
ಇದು ಒಂದೇ ಕೇರಿ ಅಥವಾ ಸಂಘಟನೆಯಿಂದ ಸಾಧ್ಯವಾಗುವ ಕಾರ್ಯವಲ್ಲ. ಸನಾತನ ಧರ್ಮ, ಹಿಂದೂ ಅಸ್ಮಿತೆ ಹಾಗೂ ಆಚಾರ-ವಿಚಾರಗಳ ಉಳಿವಿಗೆ ನಾಡಿನ ಪ್ರತಿಯೊಬ್ಬ ಭಕ್ತನ ಕಾಣಿಕೆಯ ಅಗತ್ಯವಿದೆ. ಭಕ್ತಿಯಿಂದ ನೀಡುವ ದೇಣಿಗೆ ಧರ್ಮ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರದ ಮಹತ್ಕಾರ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಸಮಿತಿಯು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ದೇವಾಲಯ ನಿರ್ಮಾಣವು ಸಾವಿರ ಯಜ್ಞಗಳ ಫಲ ಎಂಬ ಶಾಸ್ತ್ರ ವಚನದಂತೆ, ತಮ್ಮ ಶಕ್ತಾನುಸಾರ ಸಹಾಯ ಮಾಡಿ ಈ ಪುರಾತನ ದೇವಸ್ಥಾನವನ್ನು ಮತ್ತೊಮ್ಮೆ ಆರಾಧನಾ ಕೇಂದ್ರವನ್ನಾಗಿ ಮಾಡಲು ಸಹಕರಿಸಬೇಕೆಂದು ಮಲೆಯಚ್ಚ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಭಕ್ತರಲ್ಲಿ ಕೋರಿದೆ.
ಮಲೆಯಚ್ಚ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚೇರಂಡ ರವಿ ಬಿದ್ದಪ್ಪ ನೇತೃತ್ವದಲ್ಲಿ, ಉಪಾಧ್ಯಕ್ಷ ಕರ್ತಮಾಡ ತರುಣ್, ಕಾರ್ಯದರ್ಶಿ ಕಳ್ಳಿಚಂಡ ಸಂಪತ್ ನಾಚಪ್ಪ, ಖಜಾಂಚಿ ಚೇರಂಡ ನಾಚಪ್ಪ, ಸಮಿತಿಯ ಸದಸ್ಯರಾದ ಚೇರಂಡ ಕೀರ್ತಿ ತಿಮ್ಮಯ್ಯ, ಚೇರಂಡ ದರ್ಶನ್ ದೇವಯ್ಯ, ಕರ್ತಮಾಡ ಪ್ರೇಮ, ಕರ್ತಮಾಡ ಪುನೀತ್, ಚೇರಂಡ ಮೋಟಯ್ಯ, ಕರ್ತಮಾಡ ನಿಕಿಲ್, ಚೇರಂಡ ರೋಷನ್, ಚೇರಂಡ ಕಿರಣ್, ಚೇರಂಡ ನಿಕಿಲ್ ತಮ್ಮ ಗ್ರಾಮಸ್ಥರೊಡಗೂಡಿ ಶ್ರಮಿಸುತ್ತಿದ್ದಾರೆ.
ದೇಣಿಗೆ ನೀಡಲು ಸಂಪರ್ಕಿಸಬೇಕಾದ ಮೊ. ನಂ. 9449181937, 9964029762, 9480605103
ಬ್ಯಾಂಕ್ ಖಾತೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವೀರಾಜಪೇಟೆ ಶಾಖೆ, ಖಾತೆ ಸಂಖ್ಯೆ: 000822010001823.



