ಮಡಿಕೇರಿ : ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿರುವ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ದೇಶದ್ರೋಹದ ನಡೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾದೆ.
ಇತ್ತೀಚಿಗೆ ಹರಸಾಹಸ ಮೂಲಕ ಹೈ ಕಮಾಂಡ್ಗೆ ಬ್ಲ್ಯಾಕ್ಮೇಲ್ ಮೂಲಕ ಒತ್ತಡ ಹಾಕಿ ಸಚಿವ ಸ್ಥಾನ ಪಡೆದಿರುವ ಜಮೀರ್ ಅಹಮದ್ ಖಾನ್, ತನಗೆ ಉಸ್ತುವಾರಿ ನೀಡಿದ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಹಾಗೂ ರಾಷ್ಟ್ರ ಧ್ವಜ ಹಾರಿಸಲು ಸಮಯವಿಲ್ಲ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇದು ದೇಶ ದ್ರೋಹದ ಕೆಲಸ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಮಂತ್ರಿ ಪದವಿಯ ಪ್ರಮಾಣ ವಚನ ಸಂದರ್ಭದಲ್ಲಿ ಈ ದೇಶದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವ ಜಮೀರ್, ಕೇವಲ ಪಕ್ಷ ಸಂಘಟನೆ ವಿಚಾರದ ನೆಪ ಒಡ್ಡಿ ಧ್ವಜಾರೋಹಣವನ್ನು ತಿರಸ್ಕರಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನಾಗಿ ಬೇಜವಾಬ್ದಾರಿಯಿಂದ ವರ್ತಿಸಿರುವುದು ದೇಶ ದ್ರೋಹಕ್ಕೆ ಸಮ. ಇಂತಹ ಸಚಿವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.



