ಪೊನ್ನಂಪೇಟೆ: ಬಡತನ ಮತ್ತು ಹಸಿವಿನ ಮಹತ್ವ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ತಿಳಿಯುವಂತಾಗಬೇಕು. ಜೊತೆಗೆ ಅನ್ನದ ಬೆಲೆಯನ್ನು (ಮೌಲ್ಯವನ್ನು) ಅರಿತಿರಬೇಕು. ಮಕ್ಕಳಿಗೆ ಬಡತನ ಮತ್ತು ಹಸಿವಿನ ಅರಿವು ಮೂಡಿಸುವುದು ಅವರಲ್ಲಿ ಕೃತಜ್ಞತೆ, ಸಹಾನುಭೂತಿ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸಲು ಪೂರಕವಾಗುತ್ತದೆ ಎಂದು ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ ಹೇಳಿದ್ದಾರೆ.
ವಿರಾಜಪೇಟೆಯ ಆರ್ಜಿಯಲ್ಲಿರುವ ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಈದ್ ಮಿಲಾದ್ ಅಂಗವಾಗಿ ಆಹಾರ ಸಾಮಗ್ರಿ ಮತ್ತು ಕ್ರೀಡಾ ಪರಿಕರಗಳನ್ನು ವಿತರಿಸಿದ ನಂತರ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಸಿವಿಗೆ ಯಾವುದೇ ಜಾತಿ- ಮತಗಳ ಭೇದವಿಲ್ಲ. ಹೊಟ್ಟೆ ಹಸಿದಾಗ ಹಸಿವಿನ ನೋವು ಎಲ್ಲರಿಗೂ ಒಂದೇ ಆಗಿರುತ್ತದೆ.ಆದ್ದರಿಂದ ಬಡತನವನ್ನು ಯಾವುದೇ ಮಾನದಂಡಗಳಿಂದ ಅಳೆಯಬಾರದು ಮಾತ್ರವಲ್ಲದೆ, ಬಡತನವನ್ನು ಕೀಳರಿಮೆಯಿಂದ ಕಾಣಬಾರದು ಎಂದು ಹೇಳಿದರು.
ವಿದ್ಯಾರ್ಥಿ ದಿಸೆಯಲ್ಲಿ ಬರುವ ಎಲ್ಲ ಸವಾಲು ಎದುರಿಸಿ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಭವಿಷ್ಯದ ಸ್ವಾವಲಂಬಿ ಜೀವನಕ್ಕಾಗಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಸಾಧನೆಯ ಹಾದಿ ಹಿಡಿಯಬೇಕು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸಲು ಮನೋಬಲ ಆತ್ಮವಿಶ್ವಾಸ ದೃಢವಾದ ನಂಬಿಕೆ ಇರಬೇಕು. ವಿದ್ಯಾರ್ಥಿ ಜೀವನದಲ್ಲೇ ದೊಡ್ಡ ಮಟ್ಟದ ಕನಸು ಕಾಣಬೇಕು. ಅದಕ್ಕಾಗಿ ನಿರಂತರ ಶ್ರಮ ಪಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಪೂಜಾ ಸಜೇಶ್, ವಿದ್ಯಾರ್ಥಿಗಳೆಲ್ಲರೂ ಬುದ್ಧಿವಂತರು. ಯಾರೂ ದಡ್ಡರಲ್ಲ. ಆಲಸ್ಯ ದಡ್ಡತನಕ್ಕೆ ದಾರಿ ಮಾಡಿ ಕೊಡುತ್ತದೆ. ಆಲಸ್ಯವೇ ವಿದ್ಯಾರ್ಥಿಗಳ ಬಹುದೊಡ್ಡ ಶತ್ರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರಾದ ಅಬೂಬಕ್ಕರ್ ಹಾಜಿ, ಪ್ರಾಂಶುಪಾಲರಾದ ಇಲ್ಯಾಸ್, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಆಡಳಿತಾಧಿಕಾರಿ ರಕ್ಷಿತಾ, ಶಿಕ್ಷಕಿಯಾದ ಕೃತಾ, ಲೀನಾ, ಸಿಬ್ಬಂದಿಗಳಾದ ಎಂ. ಎ. ಮುನ್ನಾ, ರಫೀಕ್ ಮೊದಲಾದವರು ಉಪಸ್ಥಿತರಿದ್ದರು.



