ಮಡಿಕೇರಿ : ನೀರುಕೊಲ್ಲಿಯ ಸಾರ್ವಜನಿಕ ವಿಘ್ನೇಶ್ವರ ಮಿತ್ರ ಮಂಡಳಿ ವತಿಯಿಂದ ಈ ಬಾರಿ 36ನೇ ವರ್ಷದ ಗೌರಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಅದರ ಲೋಗೋವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ನೀರುಕೊಲ್ಲಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು ಲೋಗೋ ಬಿಡುಗಡೆ ಮಾಡಿದರು. 36ನೇ ವರ್ಷದ ಉತ್ಸವದ ಅಂಗವಾಗಿ 14ರಂದು ಮೂರ್ತಿ ಪ್ರತಿಷ್ಠಾಪನೆ, ಬಳಿಕ ಗ್ರಾಮದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ. ಹಗ್ಗಜಗ್ಗಾಟ, ರಸ್ತೆ ಓಟ, ಸಂಗೀತ ಕುರ್ಚಿ, ನಿಂಬೆ ಚಮಚ ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು, ತೆಂಗಿನ ಕಾಯಿಗೆ ಕಲ್ಲು ಎಸೆತ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ. 15, 16ರಂದು ಸಂಜೆ ಪೂಜೆ, ಸಮಿತಿಯ ಹಿರಿಯರಿಗೆ ಗೌರವಾರ್ಪಣೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಜರುಗಲಿದೆ. 18ರಂದು ಮಧ್ಯಾಹ್ನ 3 ಗಂಟೆ ಬಳಿಕ ಉತ್ಸವ ಮೂರ್ತಿ ಮೆರವಣಿಗೆ, ಬಳಿಕ ಕಡಗದಾಳು ಮಾಣಿಕ್ಯ ಕೆರೆಯಲ್ಲಿ ವಿಸರ್ಜಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.



