ಮಡಿಕೇರಿ : ಚೆಟ್ಟಳ್ಳಿ ಪ್ರೌಢಶಾಲೆಯ ಬಾಸ್ಕೆಟ್ ಬಾಲ್ ಅಂಕಣವನ್ನು ಕಾಫಿ ಒಣಗಿಸಲು ಬಳಸಲಾಗುತ್ತಿರುವುದಕ್ಕೆ ದಾನಿ ಜಗದೀಶ್ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಯ ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ಬೆಳೆಗಾರರೊಬ್ಬರು ತಮ್ಮ ತೋಟದ ಕಾಫಿಯನ್ನು ಒಣಗಲು ಹಾಕಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋವನ್ನು ಹಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದು ತಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೋರ್ಟ್ ನಿರ್ಮಿಸಿಕೊಟ್ಟ ದಾನಿ ಹಾಗೂ ಶಾಲೆಯ ಗಳೆ ವಿದ್ಯಾರ್ಥಿ ಬಿ.ಡಿ. ಜಗದೀಶ್ ರೈ, ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಸುವರ್ಣ ಮಹೋತ್ಸವ ಸಂದರ್ಭ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸಿದ್ದೆ.
5.5 ಲಕ್ಷ ರೂ. ಖರ್ಚಾಗಿದೆ. ನಮ್ಮ ಶಾಲೆ ಎಂಬ ಹೆಮ್ಮೆಯಿಂದ ನಾನು ಮಾಡಿ ಕೊಟ್ಟಿದ್ದು. ಈಗ ನೋಡಿದರೆ ಅಲ್ಲಿ ಕಾಫಿ ಒಣಗಿಸೋಕೆ ಹಾಕಿದ್ದಾರೆ ಅಂತ ಗೊತ್ತಾಗಿದೆ. ಅದು ಶಾಲೆಯ ಕಾಫಿ ಅಲ್ಲ. ಸಾರ್ವಜನಿಕರ ತೋಟದಲ್ಲಿ ಬೆಳೆದ ಕಾಫಿ ಅಂತ ಗೊತ್ತಾಗಿದೆ. ಇದು ನನಗೆ ಬಹಳ ನೋವಾಗಿದೆ. ನಾವು ಕಷ್ಟಪಟ್ಟು ಮಾಡಿದ್ದಕ್ಕೆ ಸಿಗುವ ಗೌರವ ಇದಾ ಎಂದು ಪ್ರಶ್ನಿಸಿದ್ದಾರೆ. ಕಾಫಿ ಒಣಗಿಸಲು ಹಾಕಿದವರು ಹಾಗೂ ಅದಕ್ಕೆ ಅನುಮತಿ ನೀಡಿದವರ ವಿರುದ್ಧ ಕ್ರಮ ಆಗಬೇಕೆಂದು ಆಗ್ರಹಿಸಿದ್ದಾರೆ.



