ನಾಪೋಕ್ಲು: ನಾಪೋಕ್ಲು- ಭಾಗಮಂಡಲ ರಸ್ತೆ ದುಸ್ಥಿತಿಯ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಆಟೋ ಚಾಲಕರು , ಸಾರ್ವಜನಿಕರು ಭಾನುವಾರ ಸಂಜೆ ಎಮ್ಮೆ ಮಾಡು – ಚೋ ನಕೆರೆ ರಸ್ತೆಯಲ್ಲಿ ಒಂದುವರೆ ಕಿಲೋಮೀಟರ್ ದೂರ ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು. ಹಳೆ ತಾಲೂಕಿನಿಂದ ಎಮ್ಮೆ ಮಾಡು ಜಂಕ್ಷನ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ ಈ ರಸ್ತೆಯಲ್ಲಿ ಸಂಚರಿಸುವ ಸಾಧ್ಯವೇ ಆಗುತ್ತಿಲ್ಲ. ಆಟೋ ಚಾಲಕರು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಆಟೋ ಚಾಲಕರು , ಸಾರ್ವಜನಿಕರು ಆಗ್ರಹಿಸಿದರು.
ಅವ್ಯವಸ್ಥೆ ಕುರಿತು ಅನೇಕ ಬಾರಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದರೂ ಟೆಂಡರ್ ಆಗಿದೆ, ಅನುದಾನದ ಕೊರತೆ ಇದೆ ಎನ್ನುವ ಉತ್ತರ ಬರುತ್ತಿದೆಯೇ ಹೊರತು ಅಭಿವೃದ್ಧಿ ಕಾರ್ಯ ಮಾತ್ರ ಇನ್ನೂ ಕೂಡ ಆರಂಭಗೊಂಡಿಲ್ಲ. ಹದಗೆಟ್ಟ ರಸ್ತೆಯಿಂದ ಶಾಲಾ ಮಕ್ಕಳು, ಹಿರಿಯ ನಾಗರೀಕರು ಹಾಗೂ ಅನಾರೋಗ್ಯ ಪೀಡಿತರು ನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ರಸ್ತೆಯಲ್ಲಿ ಜನರು ಅಡ್ಡಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದರೂ ರಸ್ತೆ ಅಭಿವೃದ್ಧಿ ಕಂಡಿಲ್ಲ. ಮಾನ್ಯ ಶಾಸಕರು ಇತ್ತ ಗಮನಹರಿಸಿ ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು .ತಪ್ಪಿದಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಕಡಿದು ಹಾಕಿ ಸಂಪೂರ್ಣ ರಸ್ತೆ ಬಂದ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಿರಣ್ ಕೋಟೆರಿ, ಗೌತಮ ಚೋ ನಕೆರೆ ,ಇಬ್ರಾಹಿಂ ಕೊಟ್ಟ ಮುಡಿ ,ಆಸಿಫ್ ಎಮ್ಮೆಮಾಡು, ಚರಣ್ ನಾಪೋಕ್ಲೂ, ಆಟೋ ಚಾಲಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
ವರದಿ. ದುಗ್ಗಳ ಸದಾನಂದ..



