ಕೊಡಗು ಕಲಾವಿದರ ಸಂಘದಿಂದ ಚೆಕ್ಕೆರ ತ್ಯಾಗರಾಜರಿಗೆ ಸನ್ಮಾನ

Chekkara Thyagaraja

Share this post :

coorg buzz

ಮಡಿಕೇರಿ: ಕೊಡಗಿನ ಖ್ಯಾತ ಸಂಗೀತ ಕಲಾವಿದ ಹಾಗೂ ಸಾಹಿತಿ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಅವರನ್ನು ಕೊಡಗು ಕಲಾವಿದರ ಸಂಘದ ವತಿಯಿಂದ ಮೇ ೨೦ ರಂದು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಕಲಾವಿದರ ಸಂಘ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ೨೦೦ಕ್ಕೂ ಅಧಿಕ ಕಲಾವಿದರಿದ್ದು, ಪ್ರಸ್ತುತ ಚೆಕ್ಕೆರ ತ್ಯಾಗರಾಜ ಅವರನ್ನು ಸನ್ಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಮೇ ೨೦ ರಂದು ಮಧ್ಯಾಹ್ನ ೧೨ ಗಂಟೆಗೆ ಮೈಸೂರು ಕೊಡವ ಸಮಾಜದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ ಎಂದರು.

ಚೆಕ್ಕೆರ ತ್ಯಾಗರಾಜ ಅವರು ಖ್ಯಾತ ಸಂಗೀತ ಕಲಾವಿದರಾಗಿದ್ದಾರೆ, ಹಾರ್ಮೋನಿಯಂ ವಾದಕರಾಗಿದ್ದಾರೆ. ನಾಟಕಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ, ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ. ಮಾತ್ರವಲ್ಲದೆ ಸಾಹಿತಿಯೂ ಆಗಿದ್ದು, ೨೨ ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಕಲಾವಿದರ ಸಂಘ ಸನ್ಮಾನಿಸುತ್ತಿದೆ ಎಂದು ತಿಳಿಸಿದರು.

ಕಲಾವಿದರ ಸಂಘ ಚಿತ್ರ ನಿರ್ದೇಶಕ ಎ.ಟಿ.ರಘು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರವನ್ನು ಇತ್ತೀಚೆಗೆ ವಿರಾಜಪೇಟೆಯಲ್ಲಿ ನಡೆಸಿತು. ಮುಂದಿನ ದಿನಗಳಲ್ಲಿ ಹಿರಿಯರನ್ನು ಸನ್ಮಾನಿಸುವುದು ಸೇರಿದಂತೆ ಕಲಾವಿದರಿಗೆ ಸ್ಫೂರ್ತಿ ತುಂಬುವ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದರು.

ಸಂಘದ ಉಪಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕಲಾವಿದರ ಸಂಘ ಕಳೆದ ೪ ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದು, ಜಿಲ್ಲೆಯಲ್ಲಿರುವ ಕಲಾವಿದರು ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಸಕ್ರಿಯಗೊಳಿಸಿ ಕಲೆಯ ಕುರಿತು ತರಬೇತಿ ಶಿಬಿರಗಳನ್ನು ನಡೆಸಲಾಗುವುದು, ವಿದ್ಯಾರ್ಥಿಗಳಿಗೆ ವಿವಿಧ ಕಲಾ ಪ್ರಕಾರಗಳನ್ನು ಹೇಳಿಕೊಡಲಾಗುವುದು ಎಂದರು. ೧೮ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಕಲಾವಿದ ಚೆಕ್ಕೆರ ತ್ಯಾಗರಾಜ ಅವರು ನಿವೃತ್ತಿಯ ನಂತರ ಸಂಗೀತ ಕಲೆಯನ್ನು ಮೈಗೂಡಿಸಿಕೊಂಡ ಕುರಿತು ಬೊಳ್ಳಜಿರ ಅಯ್ಯಪ್ಪ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಖ್ಯಾತ ರಂಗಭೂಮಿ ಕಲಾವಿದ ಅಡ್ಡಂಡ ಸಿ.ಕಾರ್ಯಪ್ಪ ಅವರ “ಸೃಷ್ಟಿ ಕೊಡಗು ರಂಗ” ನಾಟಕ ಸಂಸ್ಥೆಗೆ ಸೇರ್ಪಡೆಯಾದ ತ್ಯಾಗರಾಜ ಅವರು ಹತ್ತು ವರ್ಷಗಳ ಕಾಲ ಹಿನ್ನೆಲೆ ಸಂಗೀತ, ಹಾಡುಗಾರಿಕೆ, ವಾದ್ಯ ಸಂಗೀತ ನೀಡಿದ್ದಾರೆ. ರಂಗಭೂಮಿ ಕಲಾವಿದರ ತರಬೇತಿ ಕೇಂದ್ರ ನಿ.ನಾ.ಸಂ ಹೆಗ್ಗೋಡು ರಂಗಮAದಿರದಲ್ಲಿ ಕೊಡವ ನಾಟಕ ಪ್ರದರ್ಶನಕ್ಕೆ ಹಿನ್ನೆಲೆ ಸಂಗೀತ ನೀಡಿ ಹೆಸರು ಮಾಡಿದ್ದಾರೆ. ಮಡಿಕೇರಿ ಆಕಾಶವಾಣಿಯ ಹಾಗೂ ದೂರದರ್ಶನ ಚಂದನ ವಾಹಿನಿಯ ಕಲಾವಿದರೂ ಆಗಿ ಮನೆ ಮಾತಾಗಿದ್ದಾರೆ. ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿದ್ದ ಇವರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಾಡಗೀತೆ, ದೇಶಭಕ್ತಿಗೀತೆ, ಭಕ್ತಿಗೀತೆ, ಹಾಗೂ ಸುಗಮ ಸಂಗೀತವನ್ನು ಕಲಿಸಿಕೊಟ್ಟಿದ್ದಾರೆ.

ರಾಷ್ಟಗೀತೆಯನ್ನು ರಾಗ ತಾಳಕ್ಕೆ ತಕ್ಕಂತೆ ನಿಗಧಿತ ಸಮಯಕ್ಕೆ ಹಾಡಲು ತರಬೇತಿಯನ್ನು ನೀಡಿ ಹಲವು ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದಾರೆ. ಅಮರ ಕವಿ ಹರದಾಸ ಅಪ್ಪಚ್ಚ ಅವರ ಧ್ವನಿ ಸುರುಳಿಗೆ ಸಂಗೀತ ನೀಡಿ ನಾಟಕದ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ. ತ್ಯಾಗರಾಜ ಅವರು ಗಾಯಕರು ಮಾತ್ರವಲ್ಲದೆ ಕವಿಯೂ ಆಗಿದ್ದಾರೆ. ಹಲವು ಕವಿಗೊಷ್ಠಿಗಳಲ್ಲಿ ಪಾಲ್ಗೊಂಡಿರುವ ಇವರು ಬರೆದ ಕೊಡವ ಭಾಷೆಯ ಕವನ ಸಾಹಿತ್ಯ “ತೊಲೆಯಾರ್ಡ ಪಚ್ಚಿ” “ಬಳ್ ಸುತ್ತ ಮಲ್ಲಿಗೆ” “ಪೊಂಬಣ ಚೀಲ” ಜನ ಮೆಚ್ಚುಗೆ ಪಡೆದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಮಾತ್ರವಲ್ಲದೆ ದೆಹಲಿ, ಬೆಂಗಳೂರು, ಮಂಗಳೂರು, ಧಾರವಾಡ, ಬೆಳಗಾಂ ಮುಂತಾದೆಡೆ ತ್ಯಾಗರಾಜ ಅವರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದಲ್ಲದೆ ಕೇಂದ್ರೀಯ ಭಾಷಾ ಅಧ್ಯಯನ ಸಂಸ್ಥೆ ಭಾರತ ಸರ್ಕಾರದ ವತಿಯಿಂದ ಕೊಡವ ಭಾಷಾ ತಜ್ಞ ಪದವಿಯನ್ನು ಪಡೆದಿದ್ದಾರೆ. ಕೊಡಗಿನ ಹಲವು ಸಂಘ ಸಂಸ್ಥೆಗಳಿAದ ೨೨ ಕ್ಕೂ ಹೆಚ್ಚು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಕಲಾವಿದ ಚೆಕ್ಕೆರ ತ್ಯಾಗರಾಜ, ಅವರ ತಂದೆ ಸಂಗೀತ ವಿದ್ವಾನ್ ಚೆಕ್ಕೆರ ಅಪ್ಪಯ್ಯ ಹಾಗೂ ಹಿಂದೂಸ್ತಾನಿ ಸಂಗೀತದಲ್ಲಿ ಎಂ.ಎ ಪದವಿ ಪಡೆದಿರುವ ಪುತ್ರ ಪಂಚಮ್ ಬೋಪಣ್ಣ ಸೇರಿದಂತೆ ಮೂರು ತಲೆಮಾರಿನ ಸಂಗೀತ ಪ್ರೀತಿಯ ಕುರಿತು ಮ್ಯೂಸಿಕಲ್ ಸ್ಟರ‍್ಸ್ ಆಫ್ ಕೂರ್ಗ್, ಕೊಡಗ್ ರ ಸಂಗೀತ ಸಾಹಿತ್ಯ ಕಲಾವಿದಂಗ ಮತ್ತು ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು ಪುಸ್ತಕಗಳು ರಚನೆಯಾಗಿವೆ ಎಂದು ಬೊಳ್ಳಜಿರ ಅಯ್ಯಪ್ಪ ವಿವರಿಸಿದರು. ಮೇ ೨೦ ರಂದು ಮೈಸೂರಿನಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ಕೊಡಗಿನ ಕಲಾವಿದರೆಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಕಲಾವಿದ ಚೆಕ್ಕೆರ ತ್ಯಾಗರಾಜ ಅವರು ಅನಾರೋಗ್ಯದಲ್ಲಿದ್ದರೂ ಸಂಗೀತದ ಮೇಲಿನ ಅಭಿಮಾನವನ್ನು ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂಗೀತವನ್ನು ನೀಡಿ ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತಿದ್ದಾರೆ, ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ದೇಶಕ ಬಿ.ಜಿ.ಅನಂತಶಯನ ಮಾತನಾಡಿ ಸಂಗೀತವನ್ನು ಅತಿಯಾಗಿ ಪ್ರೀತಿಸುವ ಚೆಕ್ಕೆರ ತ್ಯಾಗರಾಜ ಅವರು ಮಾಜಿ ಸೈನಿಕರೂ ಆಗಿದ್ದು, ಯುದ್ಧದ ವಾತಾವರಣದ ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಹಾಗೂ ಮಾಜಿ ಸೈನಿಕರೊಬ್ಬರನ್ನು ಕಲಾವಿದರ ಸಂಘ ಸನ್ಮಾನಿಸುತ್ತಿರುವುದು ಶ್ಲಾಘನೀಯ ಮತ್ತು ಉತ್ತಮ ಆಯ್ಕೆ ಕೂಡ ಎಂದರು. ಹಾರ್ಮೋನಿಯಂ ನುಡಿಸುತ್ತಾ ಸಂಗೀತದಲ್ಲಿ ಸಂಪೂರ್ಣವಾಗಿ ಮೈಮರೆತು ಬಿಡುವ ತ್ಯಾಗರಾಜ ಅವರು ದೇವರ ಹಾಡುಗಳನ್ನು ಹೇಳುವ ಸಂದರ್ಭ ಭಕ್ತಿಪರವಶರಾಗಿ ಬಿಡುತ್ತಾರೆ. ಇಂತಹ ಕಲಾವಿದನನ್ನು ಸನ್ಮಾನಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎನಿಸಿದೆ ಎಂದು ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಬಿದ್ದಂಡ ಉತ್ತಮ್ ಪೊನ್ನಪ್ಪ ಹಾಗೂ ಆಚೆಯಡ ಗಗನ್ ಗಣಪತಿ ಉಪಸ್ಥಿತರಿದ್ದರು.