ವಾಹನ ಸವಾರರು ಎಚ್ಚಕೆಯಿಂದ ವಾಹನ ಓಡಿಸಬೇಕು. ಏಕೆಂದರೆ ಈಗ ಪೊಲೀಸ್ ತಪಾಸಣೆ ಚುರುಕುಗೊಂಡಿದೆ. ಪೊಲೀಸರ ಜೊತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಾಹನಗಳ ನಿಗಾ ಇಡುವ ಸಿಸ್ಟಂ ಬಂದಿದೆ. ಇದಲ್ಲದೇ ಬೇಕಾಬಿಟ್ಟಿ ವಾಹನ ಓಡಿಸುವವರಿಗೆ ಈಗ ದಂಡ ಪ್ರಮಾಣವೂ ಮೂರ್ನಾಲ್ಕು ಪಟ್ಟು ಹೆಚ್ಚಿದೆ. ಒಮ್ಮೆ ಹೀಗೆ ಏನಾದರೂ ಸಿಲುಕಿಕೊಂಡರೆ ಭಾರೀ ಪ್ರಮಾಣದಲ್ಲಿಯೇ ದಂಡ ತೆರಬೇಕಾಗುತ್ತದೆ. ಇಂತಹದ್ದೇ ಘಟನೆಯೊಂದು ಕೊಡಗಿನ ಸೋಮವಾರಪೇಟೆಯಲ್ಲಿ ವರದಿಯಾಗಿದೆ.
ಹೆಲ್ಮೆಟ್ ಧರಿಸಿಲ್ಲ, ಅತಿವೇಗವಾಗಿ, ಜೋರಾಗಿ ಶಬ್ದ ಮಾಡುತ್ತಾ, ಅಜಾಗೃತೆಯಿಂದ ಬೈಕ್ ಓಡಿಸುತ್ತಿದ್ದ ಸವಾರನೊಬ್ಬನ ಪ್ರಕರಣ ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯ ದಂಡ ವಿಧಿಸಿದೆ. ಸೋಮವಾರಪೇಟೆ ಕಲ್ಕಂದೂರು ಗ್ರಾಮದ ನಿವಾಸಿ ಅಬ್ದುಲ್ ಅಜೀಜ್ ರವರ ಮಗನಾದ ಕೆ.ಎ. ಮಹಮ್ಮದ್ ರಮೀಜ್ ಎಂಬಾತನೇ ದಂಡ ತೆತ್ತವನಾಗಿದ್ದಾನೆ.
ಸೋಮವಾರಪೇಟೆ ನಗರದಲ್ಲಿ ಈತ ಸೈಲೆನ್ಸರ್ ಮಾರ್ಪಡಿಸಿ, ಜೋರಾಗಿ ಶಬ್ದ ಮಾಡುತ್ತಾ ಹೆಲ್ಮೆಟ್ ಧರಿಸದೆ ಅಪಾಯಕಾರಿಯಾಗಿ ಬೈಕ್ (Bike) ಚಾಲನೆ ಮಾಡುತ್ತಿದ್ದರಿಂದ ಮತ್ತು Defective ನಂಬರ್ ಪ್ಲೇಟ್ ಅಳವಡಿಸಿದ್ದರಿಂದ ಹಾಗೂ ದಾಖಲಾತಿಗಳನ್ನು ಹಾಜರುಪಡಿಸದಿದ್ದರಿಂದ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಎಂ. ಮುದ್ದು ಮಾದೇವ ಅವರು ಈತನ ವಿರುದ್ದ ಪ್ರಕರಣ ದಾಖಲಿಸಿ ಸೋಮವಾರಪೇಟೆ ಪ್ರಿನ್ಸಿಪಲ್ ಸಿವಿಲ್ ಮತ್ತು JMFC ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ. ಗೋಪಾಲಕೃಷ್ಣ ಅವರು ಈ ಎಲ್ಲ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ರೂ. 23,500/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.