ವೀರಾಜಪೇಟೆ : ವೀರಾಜಪೇಟೆ ಗಣೇಶೋತ್ಸವದಲ್ಲಿ ಧ್ವನಿವರ್ದಕ ಬಳಸಿದ ಸಂಬಂಧ ದಾಖಲಾಗಿರುವ ದೂರುಗಳನ್ನು ಹಿಂಪಡೆಯಬೇಕೆಂದು ಸ್ನೇಹಿತರ ಒಕ್ಕೂಟ ಮನವಿ ಮಾಡಿದೆ.
ವರ್ಷಂಪ್ರತಿ ವೀರಾಜಪೇಟೆಯಲ್ಲಿ ನಡೆಯುವ ಐತಿಹಾಸಿಕ ಗೌರಿ ಗಣೇಶ ವಿಸರ್ಜನೋತ್ಸವ ಜಾತಿ ಮತ ಭೇದವಿಲ್ಲದೆ ಸರ್ವ ಜನಾಂಗದವರು ಕೂಡಿ ಒಗ್ಗೂಡಿ ಆಚರಿಸುತ್ತಾರೆ. ಈ ಸಂಭ್ರಮದ ಬಗ್ಗೆ ರಾಜ್ಯದ ಕೆಲವು ಮಾಧ್ಯಮಗಳು ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದು ಅದಕ್ಕೆ ಯಾವುದೇ ಪೂರಕವಾದ ಸಾಕ್ಷಿ ಇರುವುದಿಲ್ಲ. ಉತ್ಸವದಲ್ಲಿ ಸರ್ವ ಜನಾಂಗದವರು ಕುಣಿದು ಕುಪ್ಪಳಿಸಿ ಊರ ಹಬ್ಬದಂತೆ ಸಂಭ್ರಮಿಸಿದ್ದಾರೆ. ಇದರಿಂದ ಯಾರಿಗೂ ಸಮಸ್ಯೆಯಾಗಿರುವುದಿಲ್ಲ. ಹೀಗಾಗಿ ಪೊಲೀಸರು ತಾವು ದಾಖಲಿಸಿಕೊಂಡಿರುವ ದೂರನ್ನು ಹಿಂಪಡೆಯಬೇಕೆಂದು ಒಕ್ಕೂಟ ಅಧ್ಯಕ್ಷ ಮೊಹಮ್ಮದ್ ನಯಾಜ್ ಮನವಿ ಮಾಡಿದ್ದಾರೆ.
ಇಲ್ಲಿ ಹಿಂದು ಮುಸ್ಲಿಂ ಸಮುದಾಯದವರು ಸಹೋದರರಂತೆ ಬಾಂಧವ್ಯ ಹೊಂದಿದ್ದಾರೆ. ಡಿಜೆಯಿಂದಾಗಿ ಯಾರಿಗೂ ತೊಂದರೆ ಆಗಿರುವುದಿಲ್ಲ ಶಾಂತಿಯುತವಾಗಿ ಎಲ್ಲರೂ ಉತ್ಸವದಲ್ಲಿ ಪಾಲ್ಗೊಂಡು ಅತ್ಯಂತ ಯಶಸ್ವಿಯಾಗಿ ವಿಸರ್ಜನಾ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ, ಗೃಹ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಮರುಪರಿಶೀಲಿಸಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಕೋರಿದ್ದಾರೆ.



