ವೀರಾಜಪೇಟೆ : ಸುನ್ನಿ ಯುವಜನ ಸಂಘ(ಎಸ್ವೈಎಸ್) ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವೀರಾಜಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡಿದರು. ಆವರಣದಲ್ಲಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಸರ ಶುಚಿತ್ವದ ಅರಿವು ಮೂಡಿಸಿದರು. ಈ ಕಾರ್ಯದಲ್ಲಿ ಎಸ್ವೈಎಸ್ ವೀರಾಜಪೇಟೆ ವೃತ್ತದ ಸದಸ್ಯರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಸಂಘಟನೆ ರಾಜ್ಯ ಸಮಿತಿ ಸದಸ್ಯ ಮುಖಂಡ ಅಹಮ್ಮದ್ ಮದನಿ, ನಮ್ಮ ಸುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕೂಡಿರಬೇಕು. ಎಸ್ವೈಎಸ್ ವತಿಯಿಂದ ವಿವಿಧ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದರು. ಪ್ರಮುಖರಾದ ಯಾಕೂಬ್, ಕಾರ್ಯಕರ್ತರಾದ ಶಫೀಕ್, ಅಜೀಜ್ ಮುಂತಾದವರಿದ್ದರು.



