ಕುಶಾಲನಗರದ : ವಿದ್ಯುತ್ ತಗಲಿ ಹಸುವೊಂದು ಮೃತಪಟ್ಟ ಘಟನೆ ರಾಧಾಕೃಷ್ಣ ಬಡಾವಣೆಯ ಓಂ ಶಾಂತಿ ಆಶ್ರಮದ ಉದ್ಯಾನದ ಬಳಿ ನಡೆದಿದೆ. ಪಾರ್ಕ್ ಬಳಿ ಮೇಯುತ್ತಿದ್ದ ವೇಳೆ ಹಸುವಿಗೆ ವಿದ್ಯುತ್ ಸ್ಪರ್ಶವಾಗಿ ಈ ದುರ್ಘಟನೆ ಸಂಭವಿಸಿದೆ.ಮುಳ್ಳುಸೋಗೆಯ ಎಂ.ಎಸ್. ಪ್ರಸನ್ನ ಎಂಬವರಿಗೆ ಸೇರಿದ ಹಸುವಾಗಿದ್ದು, ತನ್ನ ಮುದ್ದಿನ ಹಸು ಮೃತಪಟ್ಟಿದ್ದನ್ನ ಕಂಡು ರೋಧಿಸುತ್ತಿದ್ದ ಚಿತ್ರಣ ಅಲ್ಲಿದ್ದವರಲ್ಲೂ ಕಂಬನಿ ತರಿಸಿತ್ತು.
ಈ ವ್ಯಾಪ್ತಿಯಲ್ಲಿ ಹೆಚ್ಚಿನ ಮಕ್ಕಳು ಆಟವಾಡಲು ಬರುತ್ತಿರುತ್ತಾರೆ. ಇಂದು ರಜೆ ಕೂಡಾ ಇದ್ದುದ್ದರಿಂದ ಸಮಯ ಕಳೆದಂತೆ ಹೆಚ್ಚಿನ ಮಕ್ಕಳು ಬರುವ ಸಾಧ್ಯತೆಯೂ ಇತ್ತು. ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಆದ್ರೆ ಮೂಕ ಪ್ರಾಣಿ ಬಲಿಯಾಗಿದೆ ಎಂದು ಸ್ಥಳೀಯರು ಪ್ರತಿಕ್ರಿಯಿಸಿದರು. ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
