ಮಡಿಕೇರಿ : ಹಿಂದುಳಿದ ವರ್ಗಗಳ ಕಲ್ಯಾಣ, ಪೊಲೀಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಅಂತಾರಾಷ್ಟ್ರೀಯ ದಿನ ಕುರಿತು ಜಾಗೃತಿ ಅಭಿಯಾನ ನಗರದ ಡೈರಿ ಫಾರಂನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರೀನಾಥ್, ಹಿಂದೆ ಹಲವು ರೀತಿಯ ವೈರಸ್ ಮತ್ತು ಬ್ಯಾಕ್ಟೀರಿಯಾ ರೋಗಗಳಿಗೆ ತುತ್ತಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಾನಸಿಕ ಸ್ಥಿತಿ, ಒತ್ತಡ ಹಾಗೂ ಉದಾಸೀನತೆಯಿಂದ ಹಲವು ರೋಗಗಳನ್ನು ಕಾಣುತ್ತೇವೆ. ಆದ್ದರಿಂದ ಬದುಕಿನ ಜೀವನ ಶೈಲಿಯನ್ನು ಬದಲಿಸಿಕೊಂಡು, ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಹಿಂದೆ ಮನುಷ್ಯನ ಆಯಸ್ಸು ೮೦ ರಿಂದ ೧೦೦ ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಆಯಸ್ಸು ಕಡಿಮೆಯಾಗುತ್ತಿದೆ. ಯಾವುದೇ ರೀತಿಯ ಮದ್ಯ ಹಾಗೂ ಮಾದಕ ವಸ್ತುಗಳ ಚಟಕ್ಕೆ ತುತ್ತಾಗಬಾರದು. ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಡೆಂಗ್ಯೂ ಬಗ್ಗೆ ಯಾರೂ ಸಹ ಉದಾಸೀನ ಮಾಡಬಾರದು ಎಂದು ಸಲಹೆ ಮಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್ ಮಾತನಾಡಿ, ‘ಇತ್ತೀಚೆಗೆ ಐಪಿಎಲ್ ಪಂದ್ಯದಲ್ಲಿ ಗೆದ್ದ ಆರ್ಸಿಬಿ ತಂಡ ವಿಜಯೋತ್ಸವ ಸಂದರ್ಭ ಸ್ಮರಿಸಿಕೊಂಡರೆ ಯಾವ ರೀತಿಯ ಚಟಕ್ಕೆ ಬಲಿಯಾಗುತ್ತಾರೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ, ಆದ್ದರಿಂದ ಯಾವುದೇ ಒಂದು ಚಟಕ್ಕೆ ದಾಸರಾಗಬಾರದು. ಅವರವರ ಬದುಕು ಅವರಿಗೆ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.’
ಪೊಲೀಸ್ ಇಲಾಖೆಯ ಸಿದ್ದಲಿಂಗಪ್ಪ, ಎಎಸ್ಐ ಶಿವಾನಂದ, ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ನಿಲಯ ಮೇಲ್ವಿಚಾರಕ ಆನಂದ್ ಇತರರು ಇದ್ದರು.
