ಅತಿಸಾರ ಬೇಧಿ ತಡೆಯುವಿಕೆ ಅಭಿಯಾನಕ್ಕೆ ಚಾಲನೆ – ಮಕ್ಕಳ ಉತ್ತಮ ಆರೋಗ್ಯದತ್ತ ಗಮನ ಇರಲಿ: ಡಾ.ಸತೀಶ್ ಕುಮಾರ್

Share this post :

ಮಡಿಕೇರಿ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ(ಮಕ್ಕಳ ವಿಭಾಗ) ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅತಿಸಾರ ಬೇಧಿ ತಡೆಗಟ್ಟುವಿಕೆ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸೋಮವಾರ ನಡೆಯಿತು.
ಸ್ಟಾಪ್ ಡೈಯೇರಿಯ ಕ್ಯಾಂಪೇನ್ ಅನ್ನು ಜುಲೈ ೩೧ ರವರೆಗೆ ಆಯೋಜಿಸಲಾಗಿದೆ. ಎಲ್ಲಾ ಐದು ವರ್ಷದ ಒಳಗಿನ ಮಕ್ಕಳಿಗೆ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಒಂದು ಮಗುವಿಗೆ ಎರಡು ಪ್ಯಾಕೆಟ್ ಓಆರ್‌ಎಸ್ ಮತ್ತು ಒಂದು ಪ್ಯಾಕೆಟ್ ಜಿಂಕ್ ಮಾತ್ರೆಯನ್ನು ನೀಡಲಾಗುವುದು. ಭೇದಿ ಆದಲ್ಲಿ ಮಾತ್ರ ಜಿಂಕ್ ಮಾತ್ರೆಯನ್ನು ೧೪ ದಿನಗಳವರೆಗೆ ಉಪಯೋಗಿಸುವುದು. ಈ ಮಾಹಿತಿಯು ಪ್ರತಿಯೊಬ್ಬ ಪೋಷಕರಿಗೂ ಈ ಬಗ್ಗೆ ಮಾಹಿತಿ ತಿಳಿದಿರಬೇಕು. ಗುಣಮುಖವಾಗದಿದ್ದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕು. ಅತಿಸಾರ ಬೇಧಿಯಿಂದ ಉಂಟಾಗುವ ಮರಣವನ್ನು ತಪ್ಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸರ್ಜನ್ ಡಾ.ನಂಜುಡಯ್ಯ ಅವರು ಅತಿಸಾರ ಭೇದಿಯಿಂದ ಶೂನ್ಯ ಮರಣ ಎಂಬ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಆರೋಗ್ಯ ದಿನಾಚರಣೆ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ, ಅಂಗನವಾಡಿ ಮತ್ತು ಶಾಲೆಗಳಲ್ಲಿ, ವಸತಿ ನಿಲಯಗಳಲ್ಲಿ ಎಲ್ಲಾ ಸ್ವಸಹಾಯ ಗುಂಪುಗಳಲ್ಲಿ ಸಭೆ ಏರ್ಪಡಿಸಿ ಮಾಹಿತಿ ನೀಡಲಾಗುತ್ತದೆ. ಸ್ವಚ್ಛತೆ ಬಗ್ಗೆ ಮತ್ತು ಕೈ ತೊಳೆಯುವ ಬಗ್ಗೆ ಮಾಹಿತಿ ನೀಡಿ ಮಾಹಿತಿ ಶಿಕ್ಷಣದ ಪೋಸ್ಟರ್ಸ್ ಮತ್ತು ಬ್ಯಾನರ್‌ಗಳನ್ನು ವಿತರಿಸಲಾಗಿದೆ ಹಾಗೂ ಅನಾವರಣಗೊಳಿಸಲಾಗಿದೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದೆ ಎಂದು ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಅವರು ಮಾಹಿತಿ ನೀಡಿದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಪುರುಷೋತ್ತಮ್, ಡಾ.ದಿವ್ಯರಾಣಿ ಮತ್ತು ಡಾಕ್ಟರ್ ಸಲ್ಮಾ ಮುಂತಾದವರಿದ್ದರು.