ಭಾರತ ಕಡಲ ತೀರದ ಬಾಹುಬಲಿ ʼINS ಕದಂಬʼ – ಕಾರವಾರ ಸೀಬರ್ಡ್ ನೌಕಾನೆಲೆಯೆಂಬ ರಕ್ಷಣಾ ಜಗತ್ತು..!

Share this post :

ಬರಹ – ಬನೀತ್‌ ಬೋಜಣ್ಣ ಚೈಯ್ಯಂಡ

 

 

 

 

ಭಾರತದ ಸೇನಾ ಪಡೆಗಳಲ್ಲಿ ಒಂದಾದ, ಗಡಿಯನ್ನು ಕಡಲಿನಲ್ಲಿ ಕಾಯುವ ಪಡೆಯೇ ನೌಕಾಪಡೆ. ಭಾರತೀಯ ನೌಕಾ ಪಡೆಗೆ ದೇಶದ ಕಡಲ ತೀರಗಳಲ್ಲಿ ಹಲವು ನೆಲೆಗಳಿವೆ. ಅದರಲ್ಲೊಂದು ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾರವಾರದ ನೌಕಾನೆಲೆ ಐಎನ್‌ಎಸ್‌ಕದಂಬ.
ನಮ್ಮ ರಾಜ್ಯದಲ್ಲಿ ನೌಕಾನೆಲೆ ಇದೆ ಎಂದು ಗೊತ್ತಿದ್ದರೂ, ಅಲ್ಲಿ ಹೋಗಿ ಅನುಭವಿಸಿದ ನಂತರವೇ ನನಗೆ ತಿಳಿದದ್ದು, ಅದೊಂದು ಅದ್ಭುತ ಲೋಕವೆಂದು. ಕಾರವಾರದ ನೌಕಾನೆಲೆಗೆ ನಾನು ಭೇಟಿ ನೀಡಿ ಪಡೆದ ಮಾಹಿತಿ ಹಾಗೂ ಸಣ್ಣದೊಂದು ಪ್ರವಾಸಿ ಕಥನ ಇದಾಗಿದೆ.


ಕರ್ನಾಟಕದಲ್ಲಿ ನೌಕಾನೆಲೆ ಸ್ಥಾಪನೆಯಾಗಿದ್ದು ಹೇಗೆ..?
1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ವಾಣಿಜ್ಯ, ಮೀನುಗಾರಿಕೆ ಹಾಗೂ ಪ್ರವಾಸಿ ದೋಣಿ ಹಾಗೂ ಹಡಗುಗಳ ದಟ್ಟಣೆಯಿಂದ ಭಾರತೀಯ ನೌಕಾಪಡೆಗೆ ಮುಂಬೈನ ಬಂದರಿನಲ್ಲಿ ಭದ್ರತಾ ಸಮಸ್ಯೆಗಳು ಎದುರಾಯಿತು. ಈ ಸಮಸ್ಯೆಗೆ ಪರಿಹಾರ ಹುಡುಕಲು ವಿವಿಧ ಆಯ್ಕೆಗಳನ್ನು ಪರಿಗಣಿಸಲಾಯಿತು. ಭಾರತದ ಕೊಚ್ಚಿ, ವಿಶಾಖಪಟ್ಟಣಂ, ಹಾಗೂ ಇನ್ನಿತರ ಸಣ್ಣ ನೌಕಾ ನೆಲೆ ಹಾಗೂ ಕಡಲ ತೀರಗಳನ್ನು ಪರಿಶೀಲಿಸಲಾಯಿತು. ಆದರೆ ಭಾರತೀಯ ನೌಕಾಪಡೆಗೆ ಸೂಕ್ತವಾದ ಸ್ಥಳ ದೊರಕದ ಕಾರಣ ಹೊಸದೊಂದು ನೌಕಾನೆಲೆ ಸ್ಥಾಪಿಸಲು ನಿರ್ಧರಿಸಿ, ತಿರುವನಂತಪುರಂ, ಕಣ್ಣೂರು ಮುಂತಾದ ಜಾಗಗಳನ್ನು ಪರಿಗಣಿಸಲಾಯಿತು. ಆದರೆ ಕೊನೆಗೆ ಕಾರವಾರವನ್ನು ಆಯ್ಕೆ ಮಾಡಲಾಯಿತು. ಕಾರವಾರದಲ್ಲಿ ಆಳವಾದ ಬಂದರು ಹಾಗೂ ವಿಸ್ತರಣೆಗಾಗಿ ಆ ಭೂಮಿ ಲಭ್ಯವಿತ್ತು. ಆದ್ದರಿಂದ ದೊಡ್ಡ ವಿಮಾನ ವಾಹಕ ಹಡಗುಗಳನ್ನು ನಿರ್ವಹಿಸಬಹುದಾಗಿತ್ತು.
ಪ್ರಾಜೆಕ್ಟ್‌ ಸೀಬರ್ಡ್‌
ಕಾರವಾರದಲ್ಲಿ ನೌಕಾ ನೆಲೆಯನ್ನು 1985ರಲ್ಲಿ ಸ್ಥಾಪಿಸಲು ಮೊದಲು ಅನುಮೋದಿಸಲಾಗಿತ್ತು. ನಂತರ 1986 ಅಕ್ಟೋಬರ್‌ನಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರಿಂದ ಶಿಲಾನ್ಯಾಸ ನೆರವೇರಿಸಲಾಗಿತ್ತು. ಅಂದು 1700 ಕೋಟಿ ರೂ. ವೆಚ್ಚದಂತೆ ಯೋಜನೆ ನಿರ್ಮಾಣವನ್ನು 7 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿತ್ತು. ಆದರೆ, ರಕ್ಷಣಾ ಸಚಿವಾಲಯದ ಬಜೆಟ್‌ ಕೊರತೆಯಾದ ಕಾರಣ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. 1990 ಹಾಗೂ 95ರಲ್ಲಿ ಮತ್ತೆ ಪುನರಾರಂಭಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಅಂತಿಮವಾಗಿ 1999ರಲ್ಲಿ ಕೇಂದ್ರ ರಕ್ಷಣಾ ಮಂತ್ರಿ ಜಾರ್ಜ್‌ಫೆರ್ನಾಂಡಿಸ್‌ ಅವರು ಪ್ರೋಜೆಕ್ಟ್‌ ಸೀಬರ್ಡ್‌ ಯೋಜನೆಗೆ ಅನುಮೋದನೆ ನೀಡಿ ಅದೇ ವರ್ಷ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭಿಸಲಾಯಿತು.

ಐಎನ್‌ಎಸ್‌ಕದಂಬ…
ಕದಂಬರ ಸಾಮ್ರಾಜ್ಯದ ನೆನಪಿಗಾಗಿ 2005ರ ಮೇ 31ರಂದು ಐಎನ್‌ಎಸ್‌ ಕದಂಬ ಎಂಬ ನಾಮಕರಣದೊಂದಿಗೆ ನೌಕಾನೆಲೆಯ ಚಟುವಟಿಕೆಗಳು ಪ್ರಾರಂಭವಾದವು. ಈ ನೌಕಾನೆಲೆ ಮುಂಬೈ ಹಾಗೂ ವಿಶಾಖಪಟ್ಟಣಂ ನಂತರ ಭಾರತದ ಮೂರನೇ ನೌಕಾನೆಲೆಯಾಯಿತು. ಐಎನ್‌ಎಸ್‌ ಕದಂಬ ಈಗಾಗಲೆ ಹಲವು ಹಂತಗಳ ಮುಂದುವರೆದ ಕಾಮಗಾರಿಗಳ ನಂತರ ಬೆಳೆದು ಪ್ರಸಿದ್ಧ ಯುದ್ಧನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ಸ್ವಾಗತಿಸಲು ಸಿದ್ಧವಾಯಿತು.

ಐಎನ್‌ಎಸ್‌ ವಿಕ್ರಮಾದಿತ್ಯ…
1987ರಲ್ಲಿ ಸೋವಿಯತ್‌ಯೂನಿಯನ್‌ನ ನೌಕಾಪಡೆ ಬಾಕು ಎಂಬ ಯುದ್ಧ ನೌಕೆಯನ್ನು ತಯಾರಿಸಿತು. ನಂತರ ಅಡ್ಮಿರಲ್‌ ಗೋಷ್ಕೋರ್ವ್‌ ಎಂದು ಕರೆಯಲ್ಪಟ್ಟ ಈ ನೌಕೆಯು ರಷ್ಯಾದ ನೌಕಾಪಡೆಯಲ್ಲಿ ಸೇವೆ ಮಾಡಿತ್ತು. 2004 ಜನವರಿ 22ರಂದು ರಷ್ಯಾ ಹಾಗೂ ಭಾರತ ಈ ಯುದ್ಧ ನೌಕೆಯ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿದವು. ನೌಕೆಯ ಬೆಲೆಯು ಉಚಿತವಾಗಿದ್ದರೂ, ನವೀಕರಣ ಯುದ್ದ ವಿಮಾನಗಳು ಹಾಗೂ ಆಯುಧಗಳ ವ್ಯವಸ್ಥೆಗಾಗಿ ಸುಮಾರು 1.8 ಬಿಲಿಯನ್‌ ಡಾಲರ್‌ ಮೊತ್ತವನ್ನು ಪಾವತಿಸಲು ಒಪ್ಪಿತು. ರಷ್ಯಾ ಸರ್ಕಾರವೂ ಒಪ್ಪಂದದ ನಂತರವೂ ಹಲವು ಪಟ್ಟು ವೆಚ್ಚವನ್ನು ಹೆಚ್ಚು ಮಾಡಿತು. ಎರಡು ದೇಶಗಳ ಮಾತುಕತೆಯ ನಂತರ 2012-13ರ ಹೊತ್ತಿಗೆ ಎಲ್ಲಾ ನವೀಕರಣದ ನಂತರ ಮರುನಾಮಕರಣಗೊಂಡ ವಿಕ್ರಮಾದಿತ್ಯ ಯುದ್ಧ ನೌಕೆಯು ನಮ್ಮ ಭಾರತವನ್ನು ಸೇರಿತು.
ಐಎನ್‌ಎಸ್‌ ವಿಕ್ರಮಾದಿತ್ಯ 44,500 ಟನ್‌ತೂಕವಿರುವ ಯುದ್ಧ ನೌಕೆ. ಇದರಲ್ಲಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಹಾರಾಡಲು ಬೇಕಾದ ಸ್ಕೀಜಂಪ್‌ಹಾಗೂ ಲ್ಯಾಂಡಿಂಗ್‌ಗೆ ಬೇಕಾದ ಅರೆಸ್ಟರ್‌ ಗೇರ್‌ಗಳ ವ್ಯವಸ್ಥೆಯಿದೆ. ಪ್ರಪಂಚದ ಕೆಲವೇ ಕೆಲವು ದೇಶಗಳಲ್ಲಿರುವ ಈ ನೌಕೆಯಲ್ಲಿ ಸುಮಾರು 1600 ತರಬೇತಿ ಪಡೆದ, ಯಾವುದೇ ಕ್ಷಣದಲ್ಲಿ ಎಂಥದ್ದೇ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧರಾದ ಸಮರ್ಪಿತ ನೌಕಾ ಯೋಧರನ್ನು ಒಳಗೊಂಡಿದೆ. ಯುದ್ಧ ವಿಮಾನಗಳಾದ ಮಿಗ್‌29ಕೆ, ಕಮೋಡ್‌28, ಹೆಲಿಕಾಪ್ಟರ್‌ಗಳಾದ ಧ್ರುವ್‌ಮತ್ತು ಚೇತಕ್‌ ಈ ನೌಕೆಯಿಂದ ಕಾರ್ಯನಿರ್ವಹಿಸುತ್ತದೆ.
ವಿಕ್ರಮಾದಿತ್ಯ ಎಂಬ ಹೆಸರು ಸೂರ್ಯನಂತೆ ಧೈರ್ಯಶಾಲಿ ಎಂಬ ಅರ್ಥವನ್ನು ಹೊಂದುತ್ತದೆ. ಭಾರತೀಯ ಸಾಗರ ಪ್ರಾಂತ್ಯದಲ್ಲಿ ಶಾಂತಿ ಹಾಗೂ ಸಮೃದ್ಧಿಯನ್ನು ಕಾಯ್ದುಕೊಳ್ಳುವ ಮೂಲಕ ರಾಷ್ಟ್ರಹಿತವನ್ನು ಭದ್ರಗೊಳಿಸುತ್ತದೆ. ಐಎನ್‌ಎಸ್‌ವಿಕ್ರಮಾದಿತ್ಯದ ಘೋಷವಾಕ್ಯ ʼStrike far – Strike Sure’.

ಅಂಜದೀಪ ಯುದ್ಧ ಸ್ಮಾರಕ…
ಭಾರತ 1947ರಲ್ಲಿ ಸ್ವಾತಂತ್ರ್ಯ ಹೊಂದಿದ ನಂತರ ಪೋರ್ಚುಗೀಸರು ಗೋವಾ, ದೀವ್‌, ದಮನ್‌ಹಾಗೂ ಕಾರವಾರ ಬಳಿ ಇರುವ ಅಂಜದೀಪ ದ್ವೀಪವನ್ನು ತನ್ನ ವಶದಲ್ಲಿಟ್ಟುಕೊಂಡಿತ್ತು. ಭಾರತ ಸರ್ಕಾರವು ಈ ಭಾಗಗಳನ್ನು ಹಸ್ತಾಂತರಿಸಲು ಶಾಂತಿಯುತವಾಗಿ ಕೇಳಿದರೂ, ಪೋರ್ಚುಗೀಸಲು ಒಪ್ಪಿರಲಿಲ್ಲ. ಗೋವಾ ಮುಕ್ತಗೊಳಿಸುವ ಯೋಜನೆಯ ಆಪರೇಷನ್‌ವಿಜಯ್‌ನ ಭಾರತೀಯ ನೌಕಾಪಡೆಯು ಆಪರೇಷನ್‌ಚಟ್ನಿ ಎಂಬ ಸೇನಾ ಕಾರ್ಯಾಚರಣೆಯ ಮೊದಲ ಹಂತವಾಗಿ 18 ಡಿಸೆಂಬರ್‌1961ರಂದು ಭಾರತದ 75 ಕಮಾಂಡೋಗಳು ಅಂಜದ್ವೀಪದ ಬಳಿ ತಲುಪಿದಾಗ ಪೋರ್ಚುಗೀಸ್‌ ಯೋಧರು ಮೊದಲು ಶಾಂತಿಯ ನಾಟಕವಾಡಿ ತದನಂತರ ನಮ್ಮ ಸೈನಿಕರತ್ತ ಗುಂಡು ಹಾರಿಸಿದರು. ಭಾರತೀಯ ಯೋಧರು ಧೈರ್ಯದಿಂದ ಆಕ್ರಮಣ ನಡೆಸಿ ಪೋರ್ಚುಗೀಸರ ನಿರ್ನಾಮ ಮಾಡಿ ದ್ವೀಪವನ್ನು ವಶಪಡಿಸಿಕೊಂಡಿತು. ಈ ಯುದ್ಧದಲ್ಲಿ ಭಾರತೀಯ ನೌಕಾಪಡೆಉಯ 7 ಯೋಧರು ಹುತಾತ್ಮರಾದರು. ಈ ಯೋಧರ ನೆನಪಿನಲ್ಲಿ ಅಂಜದ್ವೀಪ ಯುದ್ಧ ಸ್ಮಾರಕವನ್ನು ಕಾರವಾರದ ನೌಕಾನೆಲೆಯಲ್ಲಿ ನಿರ್ಮಿಸಲಾಗಿದೆ. ಕಾರವಾರದ ಐಎನ್‌ಎಸ್‌ಕದಂಬವು ಭಾರತ ದೇಶದ ಹೆಮ್ಮೆಯಾಗಿದ್ದು, ಸುಮಾರು 12,000 ಎಕ್ರೆಯಲ್ಲಿ ಸುಮಾರು 28 ಕಿಮೀ ವ್ಯಾಪ್ತಿಯಲ್ಲಿ ಹರಡಿದ್ದು, ಪ್ರಸ್ತುತ ಏಷ್ಯಾ ಖಂಡದಲ್ಲಿ ಅತಿ ದೊಡ್ಡ ನೌಕಾ ನೆಲೆಯಾಗಿದೆ. ಪ್ರಸ್ತುತ ಇನ್ನಷ್ಟು ಹೊಸ ಯೋಜನೆಗಳು, ಹೊಸ ತಂತ್ರಜ್ಞಾನಗಳನ್ನು ಅಳವಡಿಸುತ್ತಾ ಜಗತ್ತಿನಲ್ಲಿಯೇ ಅತಿ ದೊಡ್ಡ ನೌಕಾನೆಲೆಯಾಗುವತ್ತ ಮುನ್ನುಗ್ಗುತ್ತಿದೆ. ಈ ನೌಕಾನೆಲೆಯಲ್ಲಿ ಸುಮಾರು 12000 ನೌಕಾಪಡೆಯ ಯೋಧರು, ಅವರ ಕುಟುಂಬದವರು ವಾಸಿಸುತ್ತಿದ್ದು, ಜೊತೆಗೆ ಯುದ್ಧ ನೌಕೆಗಳಾದ ವಿಕ್ರಮಾದಿತ್ಯ, ವಿಕ್ರಾಂತ್‌, ತ್ರಿಶೂಲ್‌, ಮೈಸೂರ್‌, ಇತ್ಯಾದಿಗಳೊಂದಿಗೆ ಸುಸಜ್ಜಿತ ಜಲಾಂತರ್‌ಗಾಮಿಗಳು ಕಾರ್ಯನಿರ್ವಹಿಸುತ್ತಿದೆ.


ನೌಕಾಪಡೆಯ ಯೋಧರು ಅತ್ಯಂತ ಶಿಸ್ತುಬದ್ಧ ಹಾಗೂ ಶ್ರಮಜೀವಿಗಳು. ಹಡಗು, ಜಲಾಂತರ್ಗಾಮಿಗಳು ಅಲ್ಲದೆ, ನೆಲೆಯಲ್ಲಿ ಹಲವು ಕಠಿಣ ಕೆಲಸಗಳನ್ನು ನಿರ್ವಹಿಸುತ್ತಾರೆ. ನಾವಿಕರು ಸಾಮಾಯವಾಗಿ ಗ್ರೀಸ್‌, ಎಣ್ಣೆ, ಮತ್ತು ಕೊಳೆಗೆ ಒಡ್ಡಿಕೊಳ್ಳುತ್ತಾರೆ. ಈ ಕಾರಣದಿಂದ ತಮ್ಮ ಕೈಗಳು ಕೊಳಕಾಗಿರುವುದನ್ನು ತಪ್ಪಿಸಲು ತಮ್ಮ ಅಂಗೈ ಕೆಳಗೆ ಮಾಡಿ ಸೆಲ್ಯೂಟ್‌ಮೂಲಕ ಗೌರವ ಸೂಚಿಸುತ್ತಾರೆ. ಭಾರತದ ಸಾಗರ ತೀರದಲ್ಲಿದ್ದುಕೊಂಡು ಶತ್ರುಗಳಿಂದ ತಾಯ್ನಾಡನ್ನು ಕಾಯುವ ನೌಕಾಪಡೆಯು ʼಶಂ ನೋ ವರುಣʼ ಎಂಬ ಧ್ಯೇಯ ವಾಕ್ಯವನ್ನು ಇರಿಸಿಕೊಂಡಿದೆ. ಇದು ಸಂಸ್ಕೃತ ಪದಗುಚ್ಛವಾಗಿದ್ದು, ವರುಣ ದೇವನು ನಮಗೆ ಶುಭವನ್ನು ನೀಡಲಿ ಎಂಬ ಅರ್ಥವನ್ನು ಹೊಂದಿದೆ. ಐಎನ್‌ಎಸ್‌ ಕದಂಬದಂತಹ ನೌಕಾನೆಲೆ ನಮ್ಮ ಕರುನಾಡಿನಲ್ಲಿರುವುದಕ್ಕೆ ನಾವೆಲ್ಲರು ಹೆಮ್ಮೆ ಪಡಬೇಕಾಗಿದೆ. ಇಂತಹ ನೌಕಾನೆಲೆಯ ಹಾಗೂ ನೌಕಾಪಡೆಯ ಯೋಧರನ್ನು ಸಂದರ್ಶಿಸುವ ಅವಕಾಶ ದೊರೆತದ್ದು ನನ್ನ ಪುಣ್ಯವೆಂದು ಭಾವಿಸುತ್ತಾ, ನೌಕಾಪಡೆ ಹಾಗೂ ಸದಾ ಸುರಕ್ಷಿತವಾಗಿರಲಿ ಎಂದು ಎಲ್ಲರೂ ಆಶಿಸೋಣ.