ಮಡಿಕೇರಿ : ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾದ ಲಕ್ಷಣ ಗೋಚರಿಸುತ್ತಿದ್ದು, ನಾಳೆಯಿಂದ(ಜೂ.೧೨) ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಾ ಅಲರ್ಟ್ ಆಗಿದೆ. ನಾಳೆ (ಜೂನ್ 12) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಈ ಕುರಿತು ಜಿಲ್ಲಾಧಿಕಾರಿ ಕೆ. ವೆಂಕಟ್ ರಾಜಾ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಮೇ ಕೊನೇ ವಾರದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ವಿವಿಧ ರೀತಿಯ ಹಾನಿಯಾಗಿತ್ತು. ಮಹಾಮಳೆಯ ಪರಿಣಾಮ ಶಾಲಾರಂಭ ಕೂಡಾ ಎರಡು ದಿನ ಮುಂದಕ್ಕೆ ಹೋಗಿತ್ತು. ಆ ಮಳೆಯ ಅನಾಹುತ ಮನಗಂಡ ಜಿಲ್ಲಾಡಳಿತ ಈ ಬಾರಿ ಮಳೆ ಬೀಳುವುದಕ್ಕೂ ಮುನ್ನವೇ ಶಾಲೆ, ಕಾಲೇಜಿಗೆ ರಜೆ ಘೋಷಿಸಿದೆ..!