ಮಡಿಕೇರಿ : ಮಡಿಕೇರಿಯ (Madikeri) ಶ್ರೀ ರಾಮಾಂಜನೇಯ ಭಜನಾ ಮಂಡಳಿ ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ಕುಣಿತ ಭಜನಾ ತರಬೇತಿ ಶನಿವಾರ ಆರಂಭವಾಗಿದೆ.ಮಹದೇವಪೇಟೆಯ ಕಾಶಿಮಠ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಓಂಕಾರೇಶ್ವರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಪ್ಪಾರಂಡ ಚುಮ್ಮಿ ದೇವಯ್ಯ ಮತ್ತಿತರೆ ಗಣ್ಯರು ಶಿಬಿರಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ಭಜನೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಶಾರೀರಿಕವಾಗಿ ಹಲವು ಅನುಕೂಲತೆಗಳನ್ನು ಪಡೆಯಬಹುದು. ಕುಣಿತ ಭಜನೆಯನ್ನು ಜಿಲ್ಲೆಯಲ್ಲಿ ಹೆಚ್ಚು ಪ್ರಚುರಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಇದರಲ್ಲಿ ತೊಡಗಿಸಿಕೊಳ್ಳಲು ಈ ಕಾರ್ಯಾಗಾರ ಪ್ರೇರೇಪಣೆಯಾಗಲಿ ಎಂದು ಪ್ರಮುಖರು ಆಶಯ ವ್ಯಕ್ತಪಡಿಸಿದರು.
ಶನಿವಾರ ಹಾಗೂ ಭಾನುವಾರ ಕುಣಿತ ಭಜನೆ ತರಬೇತಿ ನಡೆಯಲಿದೆ. ಜಿಲ್ಲೆಯ ವಿವಿಧೆಡೆಯ ಭಜನಾ ತಂಡಗಳ ಸದಸ್ಯರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಉದ್ಘಾಟನೆ ಸಂದರ್ಭ ಕಾಶಿಮಠದ ವಿಶ್ವನಾಥ್ ಶೆಣೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುರುಷೋತ್ತಮ್ ಮುಂತಾದವರಿದ್ದರು. ಭಾನುವಾರ ಸಂಜೆ ಭಜನಾ ಕಮ್ಮಟೋತ್ಸವ ಸಮಾರೋಪ ಕಾರ್ಯಕ್ರಮ ಜರುಗಲಿದೆ.