ಸಂಪತ್ (Sampath) ಅಲಿಯಾಸ್ ಶಂಭು ಅವರ ಮೃತದೇಹ ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು. ಈ ಪ್ರಕರಣದ ಬಗ್ಗೆ ಆರೋಪಿಗಳ ಸೆರೆಗೆ ಪೊಲೀಸರು (Police) 2 ತಂಡಗಳನ್ನು ರಚನೆ ಮಾಡಿ ತನಿಖೆ ನಡೆಸುತ್ತಿದ್ದರು. ಎಂಟು ದಿನಗಳಿಂದ ಆರೋಪಿಗಳ ಹಿಂದೆ ಬಿದ್ದಿದ್ದ ಕೊಡಗು ಜಿಲ್ಲಾ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಗಣಪತಿ ( ಗಣಪ) ಹಾಗೂ ಕಿರಣ್.
ಕಿರಣ್ ಖಾಕಿ ಬಲೆಗೆ ಬಿದ್ದಿದ್ದ, ಆದರೆ ಗಣಪತಿ ತಲೆ ಮೆರೆಸಿಕೊಂಡಿದ್ದ. ಶನಿವಾರ ಬೆಳ್ತಂಗಡಿ ಬಳಿಯಲ್ಲಿ ಪೋಲಿಸರು ಆರೋಪಿ ಗಣಪತಿಯನ್ನು ಬಂಧಿಸಿದ್ದಾರೆ. ಇನ್ನು ಕೊಲೆಯಾದವನು ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ದಾಮೋದರ ನಾಯರ್ ಅವರ ದ್ವಿತೀಯ ಪುತ್ರ ಸಂಪತ್ ಅಲಿಯಾಸ್ ಶಂಭು (45). ಕೊಲೆಯ ಹಿಂದಿನ ಕಾರಣ ಅಧಿಕೃತವಾಗಿ ಬಹಿರಂಗವಾಗಿಲ್ಲವಾದರೂ, ಹೆಣ್ಣಿನ ಮೋಹಕ್ಕೆ ಬಿದ್ದು ಕೊಲೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.