ಮಡಿಕೇರಿ : ರಾಜ್ಯ ಸರ್ಕಾರ ಸೆ.22ರಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕೊಡವರು ಗೊಂದಲಕ್ಕೀಡಾಗಬಾರದು. ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕೊಡವ ಎಂದು ನಮೂದಿಸುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮನವಿ ಮಾಡಿದ್ದಾರೆ.
ಕೆಲವು ಸಂಘಟನೆಗಳು ಕೊಡವ ಧರ್ಮ ಎಂದು ನಮೂದಿಸುವಂತೆ ಹೇಳಿಕೆ ನೀಡುತ್ತಿದೆ. ಇದರಿಂದ ಜನರಲ್ಲಿ ಗೊಂದಲ ಮೂಡುವಂತಾಗಿದೆ. ಹಿಂದಿನಿಂದಲೂ ಕೊಡವರು ಹಿಂದು ಧರ್ಮದ ಭಾಗವಾಗಿದ್ದಾರೆ. ಇದೀಗ ಕೊಡವ ಧರ್ಮ ಎಂದು ಹೇಳುವ ಮೂಲಕ ಹಿಂದು ಧರ್ಮವನ್ನು ಒಡೆಯುವ ಷಡ್ಯಂತ್ರ ಆಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.



