ಮಡಿಕೇರಿ : ಪುಲ್ವಾಮಾ ದಾಳಿಯ ಕಹಿ ನೆನಪನ್ನು ಮಡಿಕೇರಿಯಲ್ಲಿ ವಿಭಿನ್ನವಾಗಿ ಸ್ಮರಿಸಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶಾ ನಗರದ ಜನರಲ್ ತಿಮ್ಮಯ್ಯ ವೃತ್ತದ ಮೈಸೂರು ರಸ್ತೆಯ ಪ್ರಯಾಣಿಕರ ತಂಗುದಾಣಕ್ಕೆ ಬಣ್ಣ ಬಳಿದು ಚಂದಗಾಣಿಸಿದ್ದರು. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರವನ್ನು ತಂಗುದಾಣದ ಆವರಣದಲ್ಲಿಟ್ಟು ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ಪ್ರಮುಖರು ಹಾಗೂ ಸಾರ್ವಜನಿಕರು ನಮಿಸಿದರು.
ಈ ಸಂದರ್ಭ ನಿವೃತ್ತ ಸೇನಾಧಿಕಾರಿ ಗೌಡಂಡ ತಿಮ್ಮಯ್ಯ, ನಿವೃತ್ತ ಯೋಧ ಲೋಕೇಶ್, ಸೈನಿಕ ಚೇತನ್, ಪತ್ರಕರ್ತ ಚಂದನ್ ನಂದರಬೆಟ್ಟು, ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಸಾದ್ ಹಾಗೂ ಇತರರಿದ್ದರು. ದಿನದ ಮಹತ್ವದ ಬಗ್ಗೆ ಪ್ರಮುಖರು ಮಾತನಾಡಿದರು. ಈ ದಿನವನ್ನು ನಾವೆಲ್ಲರು ದೇಶಪ್ರೇಮಿಗಳ ದಿನವಾಗಿ ಆಚರಿಸಬೇಕೆಂದು ಕರೆ ನೀಡಿದರು. ಪುಲ್ವಾಮ ದಾಳಿಯ ಬಗ್ಗೆ ಶ್ರೀಶಾ ಮಾಹಿತಿ ನೀಡಿ, ದುರಂತದಲ್ಲಿ ಮಡಿ ಯೋಧರ ಹೆಸರುಗಳನ್ನು ವಿವರಿಸಿದರು.



