ಪೊನ್ನಂಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಆದರೆ ಅವರಿಗೆ ಪೂರಕ ವ್ಯವಸ್ಥೆ ಇಲ್ಲದಿರುವ ಕಾರಣ ಯಶಸ್ಸು ಸಾಧಿಸಲಾಗುತ್ತಿಲ್ಲ. ಆದ್ದರಿಂದ ಅರ್ಹ ಕ್ರೀಡಾ ಪ್ರತಿಭಗಳಿಗೆ ಸರಕಾರೇತರ ಸಂಘ ಸಂಸ್ಥೆಗಳ ಪ್ರೋತ್ಸಾಹ ತೀರಾ ಅಗತ್ಯ ಎಂದು ಕೊಡಗು ಜಿಲ್ಲಾ ಕೆಡಿಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ ಹೇಳಿದರು.
ಕಕ್ಕಬ್ಬೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಮಕ್ಕಳಿಗೆ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸುವುದರ ಮೂಲಕ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕ್ರೀಡೆಗಳು ಸಮಾಜದಲ್ಲಿ ಬಹು ಆಯಾಮದ ಪಾತ್ರವನ್ನು ವಹಿಸುತ್ತವೆ. ಇದು ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯ ಅಂಶವಾಗಿದೆ. ಕ್ರೀಡೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಕ್ರೀಡೆ ಜೀವನದಲ್ಲಿ ಮನುಷ್ಯನಿಗೆ ಶಿಸ್ತನ್ನು ಕಲಿಸುತ್ತದೆ ಎಂದರಲ್ಲದೆ, ಕ್ರೀಡಾ ಸಂಘಟನೆಯನ್ನು ವಿನೂತನವಾಗಿ ಉದ್ಘಾಟಿಸಲು ಯೋಜನೆ ರೂಪಿಸಿದ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯ ಪದಾಧಿಕಾರಿಗಳ ಸಾಮಾಜಿಕ ಚಿಂತನೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಮಾತನಾಡಿ, ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಸದಾ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರಬಾರದು. ಅಕಾಡೆಮಿ ವತಿಯಿಂದ ಆಯೋಜಿಸುವ ವಿವಿಧ ಕ್ರೀಡಾಕೂಟಗಳ ಪೈಕಿ ಎಲ್ಲಾ ಸಮುದಾಯದವರನ್ನು ಒಳಗೊಂಡ ಕ್ರೀಡಾಕೂಟವನ್ನು ಆಯೋಜಿಸಿ ಸಮಾಜಕ್ಕೆ ಐಕ್ಯತೆಯ ಸಂದೇಶ ರವಾನಿಸುವಂತಿರಬೇಕು. ಇದನ್ನು ಅಕಾಡೆಮಿ ಪ್ರತಿ ವರ್ಷ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷರಾದ ಆಲೀರ ರಶೀದ್ ಅವರು, ಕೆ.ಎಂ.ಎಸ್.ಎ. ಪೂರ್ಣರೂಪದ ಕ್ರೀಡಾ ಸಂಸ್ಥೆಯಾಗಿದೆ. ಇದನ್ನು ಇಡೀ ಜಿಲ್ಲೆಯಲ್ಲಿ ಮಾದರಿ ಕ್ರೀಡಾ ಸಂಘಟನೆಯಾಗಿ ರೂಪುಗೊಳಿಸುವ ಗುರಿ ಹೊಂದಲಾಗಿದೆ. ಕ್ರೀಡಾ ಚಟುವಟಿಗಳ ಆಯೋಜನೆ ಮತ್ತು ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ಮತ್ತು ಹಿರಿಯ ಕ್ರೀಡಾಪಟುಗಳನ್ನು ಗುರುತಿಸಿ ಇಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶ ಮಾತ್ರ ಕೆ.ಎಂ.ಎಸ್.ಎ.ಗಿದೆ ಎಂದು ಹೇಳಿದರಲ್ಲದೆ, ಅಕಾಡೆಮಿಯ ಆರಂಭೋತ್ಸವವನ್ನು ಅರ್ಥಪೂರ್ಣವಾಗಿಸಲು ಅಂಬೇಡ್ಕರ್ ವಸತಿ ಶಾಲೆಯ ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸುವುದರ ಮೂಲಕ ಲೋಕಾರ್ಪಣೆಗೊಳಿಸಿದ್ದು ಹೆಚ್ಚು ಸಂತೋಷ ಮೂಡಿಸಿದೆ ಎಂದು ರಶೀದ್ ಅವರು ಹರ್ಷ ವ್ಯಕ್ತಪಡಿಸಿದರು.
ನಂತರ ಕೆ.ಎಂ.ಎಸ್.ಎ. ಲೋಕಾರ್ಪಣೆಯ ನೆನಪಿಗಾಗಿ ಕಕ್ಕಬೆಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಲಿಚಿ ಗಿಡವೊಂದನ್ನು ನೆಟ್ಟು ಅದನ್ನು ಪೋಷಿಸಿ ಬೆಳೆಸುವ ಪ್ರತಿಜ್ಞೆ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೆ.ಎಂ.ಎಸ್.ಎ. ಉಪಾಧ್ಯಕ್ಷರಾದ ಕುಂಡಂಡ ಎ. ರಜ್ಹಾಕ್, ಕೋಶಾಧಿಕಾರಿ ಆಲೀರ ಎ. ಅಜ್ಹಿಜ್ಹ್, ಜಂಟಿ ಕಾರ್ಯದರ್ಶಿ ಕಣ್ಣಪ್ಪಣೆ ವೈ. ಅಶ್ರಫ್, ನಿರ್ದೇಶಕರಾದ ಆಲೀರ ಎ. ಹುಸೈನ್, ಕೋಳುಮಂಡ ರಫೀಕ್, ಆಲೀರ ಬಿ. ಮೂಸಾ, ಪುಂಜೆರ ಹೆಚ್. ಅಬ್ದುಲ್ಲ, ಕುಪ್ಪೋಡಂಡ ಮಹಮ್ಮದ್, ಮಂದಮಾಡ ರಫೀಕ್ (ಮುನ್ನ), ಪರವಂಡ ಎ. ಸಿರಾಜುದ್ದೀನ್, ಕಕ್ಕಬ್ಬೆ ಡಾ. ಅಂಬೇಡ್ಕರ್ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಎಂ. ಹೆಚ್. ರಜ್ಹಿನಾ, ಸಹ ಶಿಕ್ಷಕರಾದ ನಸೀಮ, ಜಲಜಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ.ಎಸ್.ಎ. ಪ್ರಧಾನ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಕ್ರೀಡಾ ಸಂಚಾಲಕರಾದ ಕತ್ತಣಿರ ಹೆಚ್. ಅಬ್ದುಲ್ ರಹಿಮಾನ್ (ಅಂದಾಯಿ) ವಂದಿಸಿದರು.



