ಮಡಿಕೇರಿ : ಲೋಕ ಕಲ್ಯಾಣಕ್ಕಾಗಿ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಸನ್ನಿಧಿಯಲ್ಲಿ ಜಪಯಜ್ಞ ಸಮಿತಿ ವತಿಯಿಂದ ನಡೆಯುತ್ತಿರುವ ಅತಿರುದ್ರ ಜಪಯಜ್ಞ ಮೇ ೨೧ರಂದು ಕಾವೇರಿ ತೀರದಲ್ಲಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ಸನ್ನಿಧಿಯಲ್ಲಿ ಸಂಪನ್ನಗೊಳ್ಳಲಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಹೊಳ್ಳ ತಿಳಿಸಿದ್ದಾರೆ.
ಮೇ 21 ರಂದು ಶ್ರೀರಾಮಲಿಂಗೇಶ್ವರ ದೇವಾಲಯದಲ್ಲ್ಲಿ ಶ್ರೀ ಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜರ ನೇತೃತ್ವದಲ್ಲಿ ಶ್ರೀ ಚಂಡಿಕಾ ಹೋಮ, ಎರಡು ಆವರ್ತದ ಶ್ರೀರುದ್ರ ಜಪ ಹಾಗೂ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ. ಮೇ 20 ರಂದು ಮಡಿಕೇರಿಯ ಶ್ರೀ ಲಕ್ಷಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ (Rudra Homa), ಮೂರು ಆವರ್ತ ಶ್ರೀ ರುದ್ರ ಜಪ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಅವಧೂತರಾದ ಶ್ರೀ ಶ್ರೀ ಶ್ರೀ ಕಾಂತಾನಂದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವ ಕೋಟ್ಯಧಿಕ ಶ್ರೀ ರುದ್ರ ಜಪ ಕೈಂಕರ್ಯವು ಕಳೆದ ಐದು ವರ್ಷಗಳಿಂದ ರಾಜ್ಯದ ಎಲ್ಲೆಡೆ ನಡೆಯುತ್ತಿದ್ದು, 50 ಲಕ್ಷ ರುದ್ರ ಜಪ ಪೂರ್ಣವಾಗಿದೆ ಎಂದು ರಮೇಶ್ ಹೊಳ್ಳ ತಿಳಿಸಿದರು.