ಕನ್ನಡಪ್ರಭ ಪತ್ರಿಕೆ ವತಿಯಿಂದ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ – ಉತ್ಸಾಹದಿಂದ ಪಾಲ್ಗೊಂಡ ನೂರಕ್ಕೂ ಅಧಿಕ ವಿದ್ಯಾರ್ಥಿಗಳು

Share this post :

ವಿರಾಜಪೇಟೆ : ಮಕ್ಕಳ ಪ್ರತಿಭೆ ಅನಾವರಣಕ್ಕೆ ಚಿತ್ರಕಲೆಯಂತಹ ಸ್ಪರ್ಧಾ ಕಾರ್ಯಕ್ರಮಗಳು ಅವಶ್ಯಕವಾಗಿದೆ. ತೀರಾ ಬಡತನದಲ್ಲಿ ಬೆಳೆದು ಬಂದವರು ಇಂದು ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರಂತೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿ ಅಧ್ಯಕ್ಷ ಪೂಜಾ ಸಜೇಶ್ ಹೇಳಿದರು.
ಕನ್ನಡಪ್ರಭ‌‌ ಪತ್ರಿಕೆ ವತಿಯಿಂದ ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಗುರುವಾರ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿದ್ಯಾರ್ಥಿಗಳಿಗೆ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ರಾಮೇಶ್ವರಂ ಎಂಬ ಪುಟ್ಟ ಊರಿನಿಂದ ಬೆಳೆದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನಮ್ಮ ದೇಶದ ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಅವರಂತೆ ಇನ್ನೂ ಸಾಕಷ್ಟು ಜನರು ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಾಧನೆ ಮಾಡಿದ್ದಾರೆ. ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಇಂದಿನ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ವಿರಾಜಪೇಟೆ ಉಪ ವಲಯದ ಉಪ ಅರಣ್ಯಾಧಿಕಾರಿ ಸಂರಕ್ಷಣಾಧಿಕಾರಿ ಎನ್.ಎಚ್. ಜಗನ್ನಾಥ್, ಶಾಲೆಯ ಆವರಣದಲ್ಲಿ ಹೂವಿನ ಗಿಡ ನೆಟ್ಟು ಮಾತನಾಡಿ ಕನ್ನಡಪ್ರಭ ಪತ್ರಿಕೆ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಲ್ಲಿ ಅರಣ್ಯ, ವನ್ಯಜೀವಿ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕೆಲಸ ಎಂದರು.
ಜೀವನದಲ್ಲಿ ವಿದ್ಯಾರ್ಜನೆ ಮುಖ್ಯವಲ್ಲ. ಎಲ್ಲ ರೀತಿಯ ವ್ಯಕ್ತಿತ್ವ ಪ್ರಮುಖವಾಗುತ್ತದೆ. ಅರಣ್ಯ ಇಲಾಖೆಯಿಂದ ದೇಶದಾದ್ಯಂತ ಹುಲಿ ಗಣತಿ ಕೂಡ ಹಮ್ಮಿಕೊಂಡಿದ್ದಾರೆ. ಕಾಡು ಉಳಿದರೆ ಮಾತ್ರ ಮನುಷ್ಯನ ಜೀವನ ಉಳಿಯಲು ಸಾಧ್ಯ. ಪ್ಲಾಸ್ಟಿಕ್ ಅನ್ನು ಮಿತವಾಗಿ ಬಳಸಬೇಕು ಎಂದು ಕರೆ ನೀಡಿದರು.
ಕೊಡಗಿನಲ್ಲಿ ಸ್ವಾಭಾವಿಕ ಅರಣ್ಯವನ್ನು ನಾವು ಹೆಚ್ಚಿಸಬೇಕಾಗಿದೆ. ಅರಣ್ಯ ಪ್ರದೇಶ ಹೆಚ್ಚಾದರೆ ಮಾತ್ರ ನಾವು ಉಳಿಯಲು ಸಾಧ್ಯ. ಕಾವೇರಿ ನದಿ ತಟ ಸಮೃದ್ಧವಾದರೆ ಮಾತ್ರ ಎಲ್ಲ ಪ್ರದೇಶ ಕೂಡ ಸಮೃದ್ಧವಾಗಿರುತ್ತದೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಪರಿಸರದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದರು.
ವಿರಾಜಪೇಟೆ ಹಿಂದು ಮಲಯಾಳಿ ಸಂಘದ ಅಧ್ಯಕ್ಷ ಎ. ವಿನೂಪ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಶೇ.30 ರಷ್ಟು ಅರಣ್ಯ ಪ್ರದೇಶವಿದೆ. ಕೊಡಗು, ಹಾಸನ, ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಮಾತ್ರ ಅಧಿಕವಿದೆ. ಪ್ರಕೃತಿಯಲ್ಲಿ ಎಲ್ಲವನ್ನೂ ಸಮತೋಲನ ಶಕ್ತಿಯಿದೆ. ಪ್ರಕೃತಿಗೆ ಮನುಷ್ಯದ ಅವಶ್ಯಕತೆ ಇಲ್ಲ. ಆದರೆ ಮನ್ಯಷ್ಯನಿಗೆ ಪ್ರಕೃತಿ ಅತಿ ಮುಖ್ಯವಾಗಿದ್ದು, ಅದನ್ನು ನಾವು ಉಳಿಸಿಕೊಳ್ಳಬೇಕೆಂದು ಹೇಳಿದರು.
ವಿರಾಜಪೇಟೆಯ ಶಿಕ್ಷಕ ಕೆ.ವಿ. ಪೌಲೋಸ್ ಮಾತನಾಡಿ, ಸ್ಪರ್ಧೆ ಮಕ್ಕಳ ಜೀವನದಲ್ಲಿ ಬಹಳ ಮುಖ್ಯ. ಸೋಲು-ಗೆಲುವು ಬೇರೆ, ಪಾಲ್ಗೊಳ್ಳುವುದು ಮುಖ್ಯ. ನಮ್ಮ ರಾಜ್ಯದಲ್ಲಿ 43 ಸಾವಿರ ಚದರ ಕಿ.ಮೀ ಅರಣ್ಯ ಪ್ರದೇಶವಿದೆ. ಹಾಗಾಗಿ ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ, ಚಿತ್ರಕಲಾ ಶಿಕ್ಷಕರಾದ ಮೀರಾ ಪೂಣಚ್ಚ, ಬಿ.ಆರ್. ಸತೀಶ್, ಸಾದಿಕ್, ಕನ್ನಡಪ್ರಭ ವಿರಾಜಪೇಟೆ ವರದಿಗಾರರಾದ ಟಿ.ಎನ್. ಮಂಜುನಾಥ್ ಇದ್ದರು.
ಶಾಲೆಯ ಶಿಕ್ಷಕಿ ಜೋಲ್ಸಿನ್ ಪ್ರಶಸ್ತಿ ವಿಜೇತರ ಹೆಸರು ವಾಚಿಸಿದರು. ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು ಪ್ರಾಸ್ತಾವಿಕ ಮಾತನಾಡಿ, ಸಿದ್ದಾಪುರ ವರದಿಗಾರ ಆರ್. ಸುಬ್ರಮಣಿ ನಿರೂಪಿಸಿದರು. ಲಿಟಿಲ್ ಸ್ಕಾಲರ್ಸ್ ಅಕಾಡೆಮಿ ಶಿಕ್ಷಕಿ ಚೈತ್ರ ಸ್ವಾಗತಿಸಿದರು. ಮಡಿಕೇರಿ ವರದಿಗಾರ ಮೋಹನ್ ರಾಜ್ ವಂದಿಸಿದರು.

ಚಿತ್ರಕಲಾ ಸ್ಪರ್ಧಾ ವಿಜೇತರು
4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಸಿದ್ದಾಪುರ ಇಕ್ರಾ ಪಬ್ಲಿಕ್ ಶಾಲೆ ಹಫ್ಸಾ ಫಾತಿಮಾ(ಪ್ರ), ರಿಝಾ ಫಾತಿಮಾ(ದ್ವಿ) ಕಾವೇರಿ ಶಾಲೆಯ ಗಿಯ ಅಚ್ಚಮ್ಮ (ತೃ), ಎಸ್ ಎಂ ಎಸ್ ಶಾಲೆಯ ಲಿಯಾನ ಜಾನಿ ಹಾಗೂ ಬ್ರೈಟ್ ಪಬ್ಲಿಕ್ ಶಾಲೆಯ ಎನ್.ಎಸ್. ಅಯಾನ್ ಸಮಾಧಾನಕರ ಬಹುಮಾನ ಗಳಿಸಿದರು.
6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಎಂ.ಬಿ. ಆಯುಷ್(ಪ್ರ), ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಮೊಹಮ್ಮದ್ ಅರ್ಶಾನ್(ದ್ವಿ), ಜುವನ್ ಕ್ರಿಸ್ಟಿ(ತೃ), ಟಿ.ಎಸ್. ಶಾನ್ವಿ ಹಾಗೂ ಲಯನ್ಸ್ ಶಾಲೆಯ ಕೆ.ಆರ್.ಪೌನಿ ಸಮಾಧಾನಕರ ಬಹುಮಾನ ಪಡೆದರು.
8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕಾವೇರಿ ಶಾಲೆಯ ಹನಿಯಾ(ಪ್ರ), ಅರ್ನವ್(ದ್ವಿ), ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಟಿ.ಕೆ. ತೇಜಸ್(ತೃ) ಬ್ರೈಟ್ ಪಬ್ಲಿಕ್ ಶಾಲೆಯ ಕೆ.ಪಿ. ನೋಫ್ಲಾ, ಎಂ.ಎ. ಫರ್ಜಾ ಶೆರೆನ್ ಸಮಾಧಾನಕರ ಬಹುಮಾನ ಗಳಿಸಿದರು.

coorg buzz
coorg buzz