ʼಕೊಡವ ಮುಸ್ಲಿಂ ಅಸೋಸಿಯೇಷನ್ ದಫ್ ಮುಟ್ಟ್’ ತಂಡ ಅಸ್ತಿತ್ವಕ್ಕೆ – ದೂರದರ್ಶನ ಕೇಂದ್ರದಲ್ಲಿ ಪ್ರದರ್ಶನ ಮತ್ತು ದಾಖಲೀಕರಣ…

Share this post :

ಪೊನ್ನಂಪೇಟೆ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧೀನದಲ್ಲಿ ‘ಕೆ.ಎಂ.ಎ. ದಫ್ ಮುಟ್ಟ್ (ರಾತೀಬ್)’ ತಂಡವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಧಾರ್ಮಿಕ ಕಲೆಯಾದ ‘ದಫ್ ಮುಟ್ಟ್’ ಅನ್ನು ಮತ್ತಷ್ಟು ಪ್ರೋತ್ಸಾಹಿಸಿ ಅದರ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಹಿನ್ನೆಲೆಯಲ್ಲಿ ಈ ತಂಡವನ್ನು ರಚಿಸಲಾಗಿದೆ.

ಹೊಸದಾಗಿ ರಚನೆಯಾದ ಈ ತಂಡ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ದಫ್ ಮುಟ್ಟ್ ಪ್ರದರ್ಶನವನ್ನು ಪ್ರಸ್ತುತಪಡಿಸಿತು. ಈ ಮೂಲಕ ಕೊಡವ ಮುಸ್ಲಿಮರ ಸಾಂಪ್ರದಾಯಿಕ ಧಾರ್ಮಿಕ ಕಲೆಯನ್ನು ಬೆಂಗಳೂರು ದೂರದರ್ಶನ ಚಂದನ ವಾಹಿನಿ ದಾಖಲೀಕರಣಗೊಳಿಸಿತು. ಕೆ. ಎಂ. ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ದೂರದರ್ಶನದ ಅತ್ಯಾಧುನಿಕ ಸ್ಟುಡಿಯೋದಲ್ಲಿ ಈ ಕಲೆಯನ್ನು ಎರಡು ಗಂಟೆಗಳ ಕಾಲ ಶ್ರದ್ಧಾ ಭಕ್ತಿಯಿಂದ ಪ್ರದರ್ಶಿಸಿತು.

ಈ ಕುರಿತು ಮಾತನಾಡಿದ ಕೆ. ಎಂ. ಎ. ಅಧ್ಯಕ್ಷರಾದ ದುದ್ದಿಯಂಡ ಸೂಫಿ ಹಾಜಿ, ಧೀರತ್ವ ತೋರಿದ ಹುತಾತ್ಮ ಸೂಫಿವರ್ಯರನ್ನು ಸ್ತುತಿಗೀತೆಗಳ ಮೂಲಕ ಸ್ಮರಿಸುವ ಸೂಫಿ ಸಾಹಿತ್ಯದ ಪ್ರಮುಖ ಭಾಗವಾಗಿರುವ
ದಫ್ ಮುಟ್ಟ್ ಕೊಡವ ಮುಸ್ಲಿಂ ಸಮುದಾಯದಲ್ಲಿ ಜನಪ್ರಿಯವಾಗಿರುವ ಒಂದು ಕಲಾ ಪ್ರಕಾರವಾಗಿದೆ. ಇದನ್ನು ಹಬ್ಬಗಳಲ್ಲಿ, ಮಸೀದಿಗಳಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳಲ್ಲಿ ಮತ್ತು ಗಣ್ಯರನ್ನು ಸ್ವಾಗತಿಸುವ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಕೊಡವ ಮುಸ್ಲಿಮರು ನೆಲೆಸಿರುವ ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಈ ದಫ್ ಮುಟ್ಟ್ ತಂಡ ಸಕ್ರಿಯವಾಗಿದೆ. ಅಲ್ಲದೆ ಪ್ರತಿ ತಿಂಗಳು ಮನೆಗಳಲ್ಲೂ ತಮ್ಮ ಧಾರ್ಮಿಕತೆಯ ಭಾಗವಾಗಿ ಇದನ್ನು ಪ್ರದರ್ಶಿಸಲಾಗುತ್ತದೆ. ದಫ್ ಮುಟ್ಟಿನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಮುದಾಯದ ಹಿರಿಯರ ಪಾತ್ರ ಅಪಾರವಾದದ್ದು ಎಂದು ವಿವರಿಸಿದರಲ್ಲದೆ, ಭಕ್ತಿ ಪೂರ್ವಕವಾಗಿ ಗೌರವಿಸಲ್ಪಡುವ ಈ ಕಲಾ ಪ್ರಕಾರವನ್ನು ಬೆಂಗಳೂರು ದೂರದರ್ಶನ ಕೇಂದ್ರ ದಾಖಲೀಕರಣಗೊಳಿಸಿದ್ದು ಈ ಕಲೆಗೆ ದೊರೆತ ಮತ್ತೊಂದು ರೀತಿಯ ಪ್ರೋತ್ಸಾಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಕೆ. ಎಂ. ಎ. ಸ್ಥಾಪಕಾಧ್ಯಕ್ಷರಾದ ಕುವೇಂಡ ವೈ. ಹಂಝತುಲ್ಲಾ, ದಫ್ ಮುಟ್ಟ್ ಕಲಾ ಪ್ರಾಕಾರವು ಸಾಂಪ್ರದಾಯಿಕತೆ, ಧಾರ್ಮಿಕತೆ ಮತ್ತು ಜನಪದೀಯ ಸತ್ವ ಹೊಂದಿರುವ ವಿಶೇಷವಾದ ಪಾಲನೆಯಾಗಿದೆ. ಮಾನವೀಯ ಮೌಲ್ಯದ ಸಂದೇಶ ಸಾರುವ ಇದರ ಸಾಹಿತ್ಯಕ್ಕೂ ವಿಶೇಷವಾದ ಸ್ಥಾನಮಾನವಿದೆ. ಈ ಕಲೆಗೆ ದೂರದರ್ಶನ ಮನ್ನಣೆ ನೀಡಿರುವುದು ಇದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದಾರೆ.

ದಫ್ ತಂಡದ ಖಲ್ಫರಾದ (ತಂಡದ ನಾಯಕ) ಕೂತಂಬಟ್ಟೀರ ಹುಸೈನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಪ್ರಸ್ತುತ ಪಡಿಸಿದ ತಂಡದಲ್ಲಿ ಕೋಳುಮಂಡ ರಫೀಕ್, ದುದ್ದಿಯಂಡ ಸಿರಾಜುದ್ದೀನ್, ಕೂತಂಬಟ್ಟೀರ ಸಾದಲಿ, ಪುಡಿಯಂಡ ಇಸ್ಮಾಯಿಲ್, ತುತ್ತಿಯಂಡ ಬಾರಿಕೆ ಹಸೀನಾರ್, ಕೂತಂಬಟ್ಟೀರ ರಶೀದ್, ಪುಡಿಯಂಡ ಅನೀಶ್, ಕೂತಂಬಟ್ಟೀರ ಸಮೀರ್, ಕೋಳುಮಂಡ ಮೊಹ್ಸೀನ್ ಮತ್ತು ಕನ್ನಡಿಯಂಡ ಶರ್ಮಿದ್ ಇದ್ದರು.

ಕಾರ್ಯಕ್ರಮ ಪ್ರಸ್ತುತಪಡಿಸಿದ ಸಂದರ್ಭದಲ್ಲಿ ಕೆ.ಎಂ.ಎ. ಅಧ್ಯಕ್ಷರಾದ ಸೂಫಿ ಹಾಜಿ, ಸ್ಥಾಪಕಾಧ್ಯಕ್ಷರಾದ ಕುವೇಂಡ ವೈ. ಹಂಝತುಲ್ಲಾ, ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ನಿರ್ದೇಶಕರುಗಳಾದ ಚಿಮ್ಮಿಚ್ಚಿರ ಇಬ್ರಾಹಿಂ (ಉಮ್ಮಣಿ) ಹಾಜಿ, ಆಲೀರ ಬಿ. ಅಬ್ದುಲ್ಲಾ, ಆಲೀರ ಹೆಚ್. ಅಬ್ದುಲ್ ಲತೀಫ್, ಕಿಕ್ಕರೆ ಮಹಮ್ಮದ್, ಆಲೀರ ಎಂ. ರಶೀದ್, ಕುಂಡಂಡ ರಜ್ಹಾಕ್ ಮೊದಲಾದವರಿದ್ದರು.

ಕೆ.ಎಂ.ಎ. ದಫ್ ರಾತೀಬ್ ತಂಡದ ‘ದಫ್ ಮುಟ್ಟ್’ ಕಾರ್ಯಕ್ರಮ ಶೀಘ್ರದಲ್ಲೇ ಬೆಂಗಳೂರು ದೂರದರ್ಶನ ಕೇಂದ್ರದ ‘ಚಂದನ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.