ಲೋಕ ಕಲ್ಯಾಣಕ್ಕಾಗಿ ಕೊಡಗಿನಲ್ಲಿ ಜಪಯಜ್ಞ – ಸಹಸ್ರ ಮೋದಕಗಳಿಂದ ಮಹಾಗಣಪತಿ ಹೋಮ

Share this post :

ಮಡಿಕೇರಿ : ಜೀವನದಿ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಸನ್ನಿಧಿಯಲ್ಲಿ ಮೇ೧೧ ರಿಂದ ಅತಿರುದ್ರ ಜಪಯಜ್ಞ ಆರಂಭಗೊಂಡಿದೆ.
ಬೆಳಗ್ಗೆ ೬.೩೦ಕ್ಕೆ ಜಪಯಜ್ಞದೊಂದಿಗೆ ಧಾರ್ಮಿಕ ಕಾರ್ಯ ಆರಂಭವಾಗಿದ್ದು, ಬಳಿಕ ಸಹಸ್ರ ಮೋದಕಗಳಿಂದ ಶ್ರೀ ಮಹಾಗಣಪತಿ ಹೋಮ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ. ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯುತ್ತಿದೆ.
ಮೇ ೧೧ರಿಂದ ೨೧ರವರೆಗೆ ನಡೆಯುವ ಜಪಯಜ್ಞಕ್ಕೆ ರಾಜ್ಯದೆಲ್ಲೆಡೆಯಿಂದ ೫೦ಕ್ಕೂ ಅಧಿಕ ಋತ್ವಿಜರು ಆಗಮಿಸಲಿದ್ದಾರೆ. ಅವಧೂತರಾದ ಶ್ರೀ ಶ್ರೀ ಶ್ರೀ ಕಾಂತಾನಂದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವ ಕೋಟ್ಯಧಿಕ ಶ್ರೀ ರುದ್ರ ಜಪ ಕೈಂಕರ್ಯವು ಕಳೆದ ಐದು ವರ್ಷಗಳಿಂದ ರಾಜ್ಯದ ಎಲ್ಲೆಡೆ ನಡೆಯುತ್ತಿದ್ದು, ೫೦ಲಕ್ಷ ರುದ್ರ ಜಪ ಪೂರ್ಣವಾಗಿದೆ. ೨೦೩೦ರ ಜನವರಿ ೧೮ಕ್ಕೆ ಶಿವಮೊಗ್ಗದಲ್ಲಿ ಜಪಯಜ್ಞ ಸಾಂಗತವಾಗಲಿದೆ.
ಮೇ ೧೧ರಿಂದ ೧೯ರವರೆಗೆ ತಲಕಾವೇರಿ ಸನ್ನಿಧಿಯಲ್ಲಿ ೯ದಿನಗಳು ಪ್ರತಿದಿನ ಮೂರು ಆವರ್ತ ಶ್ರೀ ರುದ್ರ ಜಪ ಜರುಗಲಿದೆ. ಮೇ ೨೦ರಂದು ಮಡಿಕೇರಿಯ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ ಹಾಗೂ ಮೂರು ಆವರ್ತ ಶ್ರೀ ರುದ್ರ ಜಪ ನಡೆಯಲಿದೆ. ಮೇ ೨೧ರಂದು ಕಾವೇರಿ ತೀರದಲ್ಲಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ಸನ್ನಿಧಿಯಲ್ಲಿ ರಂದು ಶ್ರೀಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜರ ನೇತೃತ್ವದಲ್ಲಿ ಶ್ರೀ ಚಂಡಿಕಾ ಹೋಮ, ಎರಡು ಆವರ್ತ ಶ್ರೀರುದ್ರ ಜಪ ನಡೆಯಲಿದೆ ಎಂದು ರಮೇಶ್ ಹೊಳ್ಳ ತಿಳಿಸಿದ್ದಾರೆ.