ಮಡಿಕೇರಿ:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ವಿವಿಧ ಯೋಗ ಸಂಸ್ಥೆ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ (Yoga) ದಿನಾಚರಣೆ ಪ್ರಯುಕ್ತ ಹಸಿರು ಯೋಗ, ಶ್ರಮದಾನ, ಸ್ವಚ್ಛತಾ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮವು ಮಂಗಳವಾರ ನಗರದ ಗಾಂಧಿ ಮೈದಾನ ಹಾಗೂ ಗಾಂಧಿ ಭವನದಲ್ಲಿ ನಡೆಯಿತು. ನಗರದ ಗಾಂಧಿ ಮೈದಾನದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ನಗರಸಭಾ ಸದಸ್ಯರಾದ ಚಂದ್ರಶೇಖರ್ ಅವರು ಚಾಲನೆ ನೀಡಿದರು.
ಬಳಿಕ ಗಾಂಧಿ ಮೈದಾನದಿಂದ ಗಾಂಧಿ ಭವನದವರೆಗೆ ಯೋಗದ ಮಹತ್ವ ಕುರಿತು ‘ಜಾಗೃತಿ ಜಾಥ’ ಜರುಗಿತು. ನಗರದ ಗಾಂಧಿ ಭವನದ ಆವರಣದಲ್ಲಿ ಗಿಡ ನೆಟ್ಟು ಅರಿವು ಮೂಡಿಸಲಾಯಿತು. ಜೊತೆಗೆ ಯೋಗ ಶಿಕ್ಷಕರಾದ ಮಹೇಶ್ ಅವರ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ ಅವರು ಪ್ರತಿಯೊಬ್ಬರ ಆರೋಗ್ಯಕ್ಕೆ ಯೋಗ ಅತ್ಯಗತ್ಯ. ಆ ನಿಟ್ಟಿನಲ್ಲಿ ವಿವಿಧ ರೋಗಗಳಿಂದ ದೂರವಿರಲು ಪ್ರತೀ ನಿತ್ಯ ಅರ್ಧಗಂಟೆಯಾದರೂ ವ್ಯಾಯಾಮ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತೀನಿತ್ಯ ಒಳ್ಳೆಯ ಜೀವನಶೈಲಿ ಅತ್ಯಗತ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಕೃತಿಕ ಪರಿಸರವನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಅವರು ಮಾತನಾಡಿ ಈ ಬಾರಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಸಿರು ಯೋಗವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಾಕೃತಿಕ ಸಂಪತ್ತು ಇದ್ದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಲ್ಲಿ ಮತ್ತಷ್ಟು ಚಲನಶೀಲತೆ ಮತ್ತು ಕ್ರೀಯಾಶೀಲತೆಯಿಂದ ಕೂಡಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗಿಡ ಮರ ಹಸಿರು ವಾತಾವರಣ ಇದ್ದಲ್ಲಿ ಒಳ್ಳೆಯ ಗಾಳಿ ಸಿಗಲಿದೆ. ಆ ನಿಟ್ಟಿನಲ್ಲಿ ಪ್ರಕೃತಿಯನ್ನು ಉಳಿಸಿ ಬೆಳೆಸಬೇಕು. ಹಾಗೆಯೇ ಯೋಗಾಭ್ಯಾಸದಲ್ಲಿ ತೊಡಗಬೇಕು ಎಂದರು. ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಅವರು ಮಾತನಾಡಿ ಹಸಿರು ಯೋಗ ಪ್ರಯುಕ್ತ ಪ್ರಕೃತಿಯೊಂದಿಗೆ ಬೆರೆತು ಯೋಗಾಭ್ಯಾಸ ಮಾಡಲಾಗುತ್ತಿದೆ. ಯೋಗದ ಮಹತ್ವವನ್ನು ಎಲ್ಲೆಡೆ ಪಸರಿಸಲಾಗುತ್ತಿದೆ ಎಂದರು.
ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ವಿಶ್ವದ ಎಲ್ಲೆಡೆ ಯೋಗದ ಪ್ರಯೋಜನ ಪಡೆಯಲಾಗುತ್ತಿದೆ. ಯೋಗ, ವ್ಯಾಯಾಮ ಮಾಡುವುದರಿಂದ ಪ್ರತೀ ನಿತ್ಯ ಕ್ರಿಯಾಶೀಲವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ಮಾಡಿದರು. ಆಯುಷ್ ವೈದ್ಯಾಧಿಕಾರಿ ಡಾ.ಅರುಣ್ ಅವರು ಮಾತನಾಡಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ, ಯೋಗ ಸಂಗಮ, ಯೋಗ ಬಂಧನ, ಯೋಗೋದ್ಯಾನ, ಯೋಗ ಧನಸ್ಸು, ಯೋಗ ಪ್ರಭಾವ ಹೀಗೆ ವಿವಿಧ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಜೂನ್, 21 ರಂದು 11ನೇ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪಿಎಸ್ಐ ಅನ್ನಪೂರ್ಣ ಅವರು ಮಾತನಾಡಿದರು. ಎಎಸ್ಐ ಶಿವಾನಂದ, ಆಯುಷ್ ವೈದ್ಯಾಧಿಕಾರಿ ಡಾ.ಶುಭ, ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ, ಎನ್ಎಸ್ಎಸ್ ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.