ವೀರಾಜಪೇಟೆ : ಕೊಡಗನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಮುಂದಾಳತ್ವದಲ್ಲಿ ಇತ್ತೀಚೆಗೆ ಬೃಹತ್ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ಇದಾದ ನಂತರ ಸಾರ್ವಜನಿಕರು, ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿದೆ.
ʼಸುಂದರ ವಿರಾಜಪೇಟೆ-ಸ್ವಚ್ಛ ಪಟ್ಟಣʼ ಎಂಬ ಧ್ಯೇಯದೊಂದಿಗೆ ವೀರಾಜಪೇಟೆ ಪುರಸಭೆ ಕಂಡಕಂಡಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ʼಕ್ಲೀನ್ ವಿರಾಜಪೇಟೆʼ ಎಂಬ ಖಾತೆ ತೆರೆಯಲಾಗಿದೆ. ಈ ಅಧಿಕೃತ ಖಾತೆಯನ್ನು ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಇಂದು ಲೋಕಾರ್ಪಣೆ ಮಾಡಿದರು.
ಯಾರಾದರು ಕಸ ಎಸೆಯುವುದು ಕಂಡುಬಂದಲ್ಲಿ ಸಾರ್ವಜನಿಕರು ಈ ಖಾತೆಗೆ ಟ್ಯಾಗ್ ಮಾಡಬಹುದಾಗಿದ್ದು, ಆ ಪೋಸ್ಟ್ ಅನ್ನು ಅನುಸರಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕರು ತಿಳಿಸಿದ್ದಾರೆ. ವೀರಾಜಪೇಟೆಯ ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಸದಸ್ಯರುಗಳಾದ ಮತೀನ್ ಎಸ್.ಹೆಚ್, ರಾಜೇಶ್ ಪದ್ಮನಾಭ, ಮೊಹಮ್ಮದ್ ರಾಫಿ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪರಿಸರ ಅಭಿಯಂತರರಾದ ರೀತು ಸಿಂಗ್, ಕೋಮಲ ಮತ್ತು ಪಕ್ಷದ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.



