ಬೆಂಗಳೂರು ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ RCB ವಿಜಯೋತ್ಸವ ಸಂದರ್ಭ ಉಂಟಾದ ಕಾಲ್ತುಳಿತದಲ್ಲಿ ಕೊಡಗು (Kodagu) ಜಿಲ್ಲೆಯ ಯುವತಿ ಬಲಿಯಾಗಿದ್ದಾರೆ. ಮೂಲತಃ ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿ ಆಗಿರುವ ಕರುಣಾಕರ ಶೆಟ್ಟಿರವರ ಪುತ್ರಿ ಚಿನ್ಮಯಿ ಶೆಟ್ಟಿ (19) ಮೃತ ದುರ್ದೈವಿ.
RCB ತಂಡದ ಅಭಿಮಾನಿ ಆಗಿದ್ದ ಈಕೆ ತನ್ನ ಗೆಳತಿಯರೊಂದಿಗೆ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆದರೆ ನೂಕು ನುಗ್ಗಲಿನಿಂದಾಗಿ ಜೊತೆಗಿದ್ದ ಗೆಳತಿಯರಿಂದ ಪ್ರತ್ಯೇಕಗೊಂಡು ಕಾಲ್ತುಳಿತಕ್ಕೆ ಸಿಲುಕಿ ಚಿಂತಾಜನಕರಾಗಿದ್ದರು. ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಮಾರ್ಗಮಧ್ಯದಲ್ಲಿಯೇ ಚಿನ್ಮಯಿ ಶೆಟ್ಟಿ ಚಿರನಿದ್ದೆಗೆ ಜಾರಿದ್ದರು. ನಂತರ ಪೋಷಕರಿಗೆ ಮಾಹಿತಿ ನೀಡಿ ನೆನ್ನೆ ದಿನ ಮೃತದೇಹವನ್ನು ಹಸ್ತಾಂತರಿಸಲಾಯಿತು. ಚಿನ್ಮಯಿ ಶೆಟ್ಟಿ ಪ್ರತಿಭಾವಂತೆ ಹಾಗೂ ಯಕ್ಷಗಾನದಲ್ಲಿ ಅತೀವ ಆಸಕ್ತಿ ಹೊಂದಿದ್ದರು.