ಮಡಿಕೇರಿ : ಮಡಿಕೇರಿ ಜನೋತ್ಸವ ದಸರಾ ಕ್ರೀಡಾ ಸಮಿತಿ ವತಿಯಿಂದ ಸೆ.28ರಂದು ನಡೆಯಬೇಕಿದ್ದ ಕಬಡ್ಡಿ ಪಂದ್ಯಾವಳಿಯನ್ನು ಮುಂದೂಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈ ಬಾರಿಯ ದಸರಾ ಕ್ರೀಡಾಕೂಟಕ್ಕೆ ವಿವಿಧ ರೀತಿಯಲ್ಲಿ ಸಮಸ್ಯೆಯಾಗುತ್ತಿದೆ. ಹಲವು ಸ್ಪರ್ಧೆಗಳನ್ನು ಮಳೆಯ ನಡುವೆಯೇ ನಡೆಸಿದ್ದೇವೆ. ಆದರೆ ಕಬಡ್ಡಿ ಪಂದ್ಯಾವಳಿಗೆ ಹೊರ ಜಿಲ್ಲೆಗಳಿಂದಲೂ ತಂಡಗಳು ಆಗಮಿಸಲಿದ್ದು, ಎಲ್ಲಾ ಆಟಗಾರರಿಗೆ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಬೇಕಿದೆ. ಮಳೆಯ ನಡುವೆ ಪಂದ್ಯಾವಳಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಕೂರ್ಗ್ ಬಝ್ಗೆ ತಿಳಿಸಿದ್ದಾರೆ.
ಒಳಾಂಗಣ ಕ್ರೀಡಾಂಗಣ ವ್ಯವಸ್ಥೆ ನಮ್ಮಲ್ಲಿಲ್ಲ. ಹೀಗಾಗಿ ಮಳೆ ಕಡಿಮೆಯಾದ ನಂತರದಲ್ಲಿ ದಿನಾಂಕ ನಿಗದಿಪಡಿಸಲಾಗುವುದು. ದಸರಾ ಕ್ರೀಡಾಕೂಟದ ಭಾಗವಾಗಿಯೇ ಸಂಭ್ರಮದಿಂದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸುತ್ತೇವೆ. ಎಲ್ಲಾ ಕ್ರೀಡಾಪಟುಗಳು ಸಹಕರಿಸುವಂತೆ ಮನವಿ ಮಾಡಿದರು.



