ಮಡಿಕೇರಿ : ಪೋಷನ್ ಮಾಸಾಚರಣೆ ಅಂಗವಾಗಿ ಸಿಂಕೋನ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಅನ್ನಪ್ರಾಶನ ಕಾರ್ಯಕ್ರಮ ನೆರವೇರಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಪೋಷನ್ ಆಚರಣೆಯ ಉದ್ದೇಶ, ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಅತಿಯಾದ ತೂಕ ನಿಯಂತ್ರಣ, ಪ್ರಾಥಮಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದ ಬಗ್ಗೆ, ತೂಕ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅನ್ನಪ್ರಾಶನ ಮತ್ತು ಸೀಮಂತ ಕಾರ್ಯಕ್ರಮ ನಡೆಸಿ ಗರ್ಭಿಣಿ ಮತ್ತು ಮಗುವಿನ ಆರೈಕೆ ಬಗ್ಗೆ, ಪೌಷ್ಟಿಕ ಆಹಾರದ ಬಗ್ಗೆ, ಕಾರ್ಯಕ್ರಮಗಳಲ್ಲಿ ಗರ್ಭಿಣಿ ಬಾಣಂತಿಯವರೊಂದಿಗೆ ಕುಟುಂಬದ ಪುರುಷರು ಪಾಲ್ಗೊಳ್ಳುವಿಕೆಗೆ ಕಾರ್ಯಕರ್ತೆಯರು ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಅಂಗನವಾಡಿಯಲ್ಲಿ ದೊರೆಯುವ ಆಹಾರಗಳಲ್ಲಿ ಪೌಷ್ಟಿಕ ಆಹಾರ ತಯಾರಿಸಿ ಪ್ರದರ್ಶಿಸಲಾಯಿತು. ಪೌಷ್ಟಿಕ ಆಹಾರದ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆ ಸಕೀನಾ ನಿರೂಪಿಸಿದರು. ವಣಚಲು ಅಂಗನವಾಡಿ ಕಾರ್ಯಕರ್ತೆ ಧರಣಿ ಸ್ವಾಗತಿಸಿದರು. ಬಾಲವಿಕಾಸ ಸಮಿತಿ ಮಾಜಿ ಅಧ್ಯಕ್ಷೆ ಇಂದಿರಾ, ಸಹಾಯಕಿ ಲಾವಣ್ಯ, ಉಪ ನಿರ್ದೇಶಕರ ಕಚೇರಿಯ ಜಯಂತಿ, ಸರೋಜಾ, ಪುಷ್ಪಾ, ಧರಣಿ ಮತ್ತಿತರರಿದ್ದರು.



