ಉತ್ತಮ ಜೀವನ ರೂಪುಗೊಳ್ಳಲು ಎನ್‌ಎಸ್‌ಎಸ್‌ ಸಹಕಾರಿ – ಗಣ್ಯರ ಅಭಿಪ್ರಾಯ

Share this post :

ವೀರಾಜಪೇಟೆ : ವಿದ್ಯಾರ್ಥಿಗಳಲ್ಲಿ ಉತ್ತಮ ಜೀವನ ರೂಪಿಸುವುದರೊಂದಿಗೆ ಅವರಲ್ಲಿರುವ ವಿಶೇಷ ಗುಣ, ಹವ್ಯಾಸಗಳನ್ನು ತೋರ್ಪಡಿಸಲು ಎನ್ ಎಸ್ ಎಸ್ ಶಿಬಿರಗಳು ಅತ್ಯುತ್ತಮ ವೇದಿಕೆಯೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಪಟ್ಟು ಕಡಂಗದಲ್ಲಿ ಗುರುವಾರ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಹೆಚ್ಚಿನ ವಿಚಾರಗಳನ್ನು ಕಲಿಯಲು ಹಾಗೂ ಕಲಿತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಬಿರಗಳು ಉತ್ತಮ ವೇದಿಕೆಯಾಗಿದ್ದು. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸಹಕಾರ, ಸೌಹಾರ್ದ ಮನೋಭಾವನೆಯನ್ನು ಬೆಳೆಸುತ್ತದೆ. ತಮ್ಮಲ್ಲಿರುವ ವಿವಿಧ ಕಲೆ, ಹವ್ಯಾಸಗಳನ್ನು ತೋರ್ಪಡಿಸಲು ಇದೊಂದು ಉತ್ತಮ ವೇದಿಕೆ. ಪ್ರತಿ ವ್ಯಕ್ತಿಯನ್ನು ಬಾಲ್ಯದಲ್ಲಿ ಆತನ ತಂದೆ ತಾಯಿಗಳ ಹೆಸರಿನ ಮೂಲಕ ಗುರುತಿಸುತ್ತಾರೆ. ಅದೇ ವ್ಯಕ್ತಿ ಯೌವ್ವನವನ್ನು ತಲುಪಿದ ಸಂದರ್ಭದಲ್ಲಿ ಆತ ಮಾಡಿದ ಸಾಧನೆಯಿಂದ ಆತನ ಹೆಸರಿನ ಮೂಲಕ ತಂದೆ ತಾಯಿಯವರನ್ನು ಗುರುತಿಸುವಂತಹ ಆಗಬೇಕು. ಹಣ, ಆರೋಗ್ಯ ಕಳೆದು ಹೋದರೆ ಮತ್ತೆ ಸಂಪಾದಿಸಬಹುದು. ಆದರೆ ನಡತೆಯನ್ನು ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಗುರು ಹಿರಿಯರು ತಂದೆ ತಾಯಿಗಳು ಹೇಳಿದಂತಹ ಉತ್ತಮ ಮಾರ್ಗದಲ್ಲಿ ಚಲಿಸಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದರು.

ಕಾರ್ಯಕ್ರಮಕ್ಕೆ ಆಥಿತಿಗಳಾಗಿ ಆಗಮಿಸಿದ ಸಮಾಜ ಸೇವಕ ಕೋಡಿರ ಪೊನ್ನು ಮಂದಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕು. ಒಳ್ಳೆಯ ಉದಾತ್ತ ಚಿಂತಕರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದ ನಿರ್ಮಾತೃಗಳಾಗಬೇಕೆಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಮತ್ತೋರ್ವ ಅತಿಥಿ ನಿವೃತ್ತ ಮುಖ್ಯ ಶಿಕ್ಷಕ ಅನ್ನಂಬೀರ ಬಾಲಕೃಷ್ಣ ಮಾತನಾಡಿ ವಿದ್ಯಾರ್ಥಿಗಳು ಈ ಹಂತದಲ್ಲಿ ಸಮಾಜದಲ್ಲಿರುವ ವಿವಿಧ ಸಮಸ್ಯೆ ಹಾಗೂ ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಸಹಕರಿಸಬೇಕು . ಭವಿಷ್ಯದಲ್ಲಿ ಸಮಾಜ ಸೇವಕರಾಗಿ ದುಶ್ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವುದರೊಂದಿಗೆ ಸಮಾಜದ ಚಿಂತಕರಾಗಿ ಬೆಳೆಯಬೇಕೆಂದರು.
ಪಾಂಡನ ಚಂಗಪ್ಪ ಮಾತನಾಡಿ, ಜೀವನದಲ್ಲಿ ಸೇವೆಯನ್ನು ಮಾಡಲು ಸಿಗುವ ಎಲ್ಲಾ ಅವಕಾಶ ಸರಿಯಾದ ರೀತಿ ಬಳಸಿಕೊಳ್ಳಬೇಕು. ಮೊಬೈಲ್, ಟಿವಿಗಳಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ದೂರವಿದ್ದು ಪುಸ್ತಕಗಳನ್ನು ಹೆಚ್ಚಾಗಿ ಬಳಸುವ ಹವ್ಯಾಸವನ್ನು ರೂಪಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ನಿಮ್ಮ ಅವಶ್ಯಕತೆ ಇದ್ದಾಗ ಸೇವೆ ಮಾಡಲು ಸದಾ ಸಿದ್ದರಿರಿ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕರಾದ ಪುಚ್ಚಿಮಾಡ ಸುಬ್ಬಯ್ಯ, ವಿದ್ಯಾರ್ಥಿಗಳು ಉತ್ತಮ ಸಮಾಜದ ನಿರ್ಮಾತೃಗಳಾಗಿ ಸೇವಾ ಮನೋಭಾವನೆಯನ್ನು ರೂಡಿಸಿಕೊಂಡು ಮಾಲಿನ್ಯ ರಹಿತವಾದ ಸಮಾಜವನ್ನು ರೂಪಿಸಬೇಕೆಂದರು .
ಅರಪಟ್ಟು ಸ.ಹಿ.ಪ್ರಾ. ಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ವಿಮಲಾ, ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ, NSS ಯೋಜನಾಧಿಕಾರಿ ಸುನಿಲ್ ಕುಮಾರ್, ಉಪನ್ಯಾಸಕರಾದ ನಿರ್ಮಿತ, ಎನ್ಎಸ್ಎಸ್ ಘಟಕದ ಸ್ವಯಂ ಸೇವಕರು ಹಾಜರಿದ್ದರು.

coorg buzz
coorg buzz