ಮಡಿಕೇರಿ ನಗರಸಭೆ ನಿರ್ಲಕ್ಷ್ಯ – ಮೋರಿಗೆ ಬಿದ್ದು ನರಳಾಡಿದ ಹಸು..!

Share this post :

ಮಡಿಕೇರಿ : ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ಮೋರಿಗೆ ಹಸು ಬಿದ್ದು ಕೆಲ ಹೊತ್ತು ನರಕ ಯಾತನೆ ಅನುಭವಿಸಿದೆ. ನಗರದ ಅಬ್ದುಲ್ ಕಲಾಂ ಬಡಾವಣೆಯ ರಸ್ತೆ ಬದಿಯಲ್ಲಿ ಮೋರಿಯೊಂದು ಯಾವುದೇ ಸುರಕ್ಷತೆ ಇಲ್ಲದೆ ಇತ್ತು. ಇಂದು ರಸ್ತೆ ಬದಿ ಹುಲ್ಲು ಮೇಯುತ್ತಾ ಬಂದ ಹಸುವೊಂದು ನಿಯಂತ್ರಣ ತಪ್ಪಿ ಮೋರಿಯೊಳಕ್ಕೆ ಬಿದ್ದಿದೆ.
ಮೇಲೆ ಏಳಲಾಗದೆ ಹಲವು ಹೊತ್ತು ಒದ್ದಾಡಿದೆ. ಇದನ್ನು ಕಂಡ ಸಾರ್ವಜನಿಕರು ಅದನ್ನು ರಕ್ಷಿಸಲು ಮುಂದಾದರು. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಬಂದ ಅಗ್ನಿಶಾಮಕ ಸಿಬ್ಬಂದಿ ಶ್ರಮಪಟ್ಟು ಹಸುವನ್ನು ಮೇಲಕ್ಕೆತ್ತಿದ್ದಾರೆ. ಮೋರಿಯೊಳಗೆ ಒದ್ದಾಡಿದ ಪರಿಣಾಮ ಹಸುವಿನ ಮೈಮೇಲೆ ಎಲ್ಲಾ ತರಚಿದ ಗಾಯವಾಗಿತ್ತು. ಮೇಲೆ ಬಂದ ಬಳಿಕ  ಹಸು ನಿಟ್ಟುಸಿರು ಬಿಟ್ಟಿತು.
ಸುರಕ್ಷತೆ ನಿಟ್ಟಿನಲ್ಲಿ ಮೋರಿ ಸುತ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನದಲ್ಲಿ ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ನಗರಸಭೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.