ಪ್ರಪಂಚದಾದ್ಯಂತದ ವೈವಿಧ್ಯಮಯ ಭಾಷೆಗಳ, ವಿವಿಧ ವರ್ಣಗಳ ಮತ್ತು ವಿವಿಧ ಆರ್ಥಿಕ ವರ್ಗಗಳ ಜನರು ಒಟ್ಟು ಸೇರುವ ಪವಿತ್ರ ಹಜ್ ಯಾತ್ರೆಯು ಯಾತ್ರಾರ್ಥಿಗಳಲ್ಲಿ ಏಕತೆ ಮತ್ತು ಸಮಾನತೆಯ ಭಾವನೆ ಮೂಡಿಸುತ್ತದೆ. ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿ ಒಬ್ಬನೇ ಸರ್ವಶಕ್ತನನ್ನು ಆರಾಧಿಸುವ ಈ ಹಜ್ಜ್ ನಿರ್ವಹಣೆ ವಿಶ್ವಾಸಿಗಳ ಜೀವನದ ಬಹುದೊಡ್ಡ ಆಧ್ಯಾತ್ಮಿಕ ಅನುಭವವಾಗಿದೆ. ಆಧ್ಯಾತ್ಮಿಕ ಉತ್ಕರ್ಷ, ಸಮಾನತೆ, ಸಹೋದರತೆಗಳನ್ನು ಬೆಳೆಸಿ ಮುಂದಿನ ಕೆಡುಕು ರಹಿತ ಬದುಕು ಮತ್ತು ಆತ್ಮ ಪರಿಶುದ್ಧತೆಯನ್ನು ಏಕೀಕರಿಸುವುದರಲ್ಲಿ ಹಜ್ಜ್ ಬಹು ದೊಡ್ಡ ಪಾತ್ರ ವಹಿಸುತ್ತದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (KMA) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು.
ಕೆ. ಎಂ. ಎ. ನಿರ್ದೇಶಕರಾದ ಕೊಂಡಂಗೇರಿಯ ಕುಪ್ಪಂದಿರ ಕೆ. ಯೂಸುಫ್ ಹಾಜಿ ಅವರು ಈ ವರ್ಷದ ಹಜ್ಜ್ ನಿರ್ವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಂಡಗೇರಿಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಜ್ಜ್ ಪೂರೈಸಲು ಜಗತ್ತಿನ ವಿವಿಧ ದೇಶಗಳ ಮೂಲೆ ಮೂಲೆಗಳಿಂದ ಮಕ್ಕಾ ಪಟ್ಟಣಕ್ಕೆ ತಲುಪುವ ಎಲ್ಲ ವಿಶ್ವಾಸಿಗಳು ದೇಶ, ಭಾಷೆ, ವರ್ಗ, ವರ್ಣ ವ್ಯತ್ಯಾಸಗಳನ್ನು ಮರೆತು ಒಂದೇ ರೀತಿಯ ವಸ್ತ್ರ ಧರಿಸಿ ಒಬ್ಬನೇ ದೇವನ ಮುಂದೆ ಕೈಯೊಡ್ದುವುದು ಅಪೂರ್ವ ಸಂದರ್ಭವಾಗಿದೆ. ಇದು ಹಜ್ಜ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ವಿಶ್ವಾಸಿಗಳಿಗೆ ನಮ್ರತೆಯನ್ನು ಉಂಟುಮಾಡುತ್ತದೆ. ವಿಶ್ವಾಸಿಗಳು ಜೀವನದಲ್ಲಿ ಒಮ್ಮೆಯಾದರೂ ಹಜ್ಜ್ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಆದರೆ ಎಲ್ಲರಿಗೂ ಈ ಅದೃಷ್ಟ ದೊರೆಯುವುದಿಲ್ಲ. ಆದ್ದರಿಂದ ದೊರೆತ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸೂಫಿ ಹಾಜಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಜ್ಜ್ ಯಾತ್ರೆ ಕೈಗೊಳ್ಳಲು ಮೇ. 10ರಂದು ಬೆಂಗಳೂರಿನಿಂದ ನಿರ್ಗಮಿಸಲಿರುವ ಕೆಎಂಎ ನಿರ್ದೇಶಕರಾದ ಕುಪ್ಪಂದಿರ ಕೆ. ಯೂಸುಫ್ ಹಾಜಿ ಅವರನ್ನು ಕೆ. ಎಂ. ಎ. ಆಡಳಿತ ಮಂಡಳಿ ಪದಾಧಿಕಾರಿಗಳ ಸಮ್ಮುಖದಲ್ಲಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಸ್ಮರಣಿಕೆ ನೀಡುವ ಮೂಲಕ ಪ್ರೀತಿಪೂರ್ವಕವಾಗಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನ್ಯ ಹಿರಿಯ ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ನಿರ್ದೇಶಕರುಗಳಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ, ದುದ್ದಿಯಂಡ ಹೆಚ್. ಮೊಯ್ದು ಹಾಜಿ, ಆಲೀರ ಬಿ. ಅಬ್ದುಲ್ಲಾ, ಪುಡಿಯಂಡ ಇ. ಶಾದುಲಿ, ಮಂಡೇಂಡ ಎ. ಮೊಯ್ದು, ಪೊಯಕೆರ ಎಸ್. ರಫೀಕ್, ಪುದಿಯಾಣೆರ ಎಂ. ಹನೀಫ್, ಆಲೀರ ಹೆಚ್. ಅಬ್ದುಲ್ ಲತೀಫ್, ಆಲೀರ ಎಂ. ರಶೀದ್, ಕತ್ತಣೀರ ಎ. ಅಬ್ದುಲ್ ರಹಿಮಾನ್ (ಅಂದಾಯಿ), ಕರತೋರೆರ ಎಸ್. ಶರ್ಫುದ್ದೀನ್, ಕುಂಡಂಡ ಎ. ರಜ್ಹಾಕ್, ದುದ್ದಿಯಂಡ ಮಾಶೂಕ್ ಸೂಫಿ ಮೊದಲಾದವರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.