ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಹಾಗೂ ಕನೆಕ್ಟಿಂಗ್ ಕೊಡವಾಸ್ ಇವರ ಸಹಯೋಗದಲ್ಲಿ ಮುತ್ತಾರ್ಮುಡಿ ಗದ್ದೆಯಲ್ಲಿ ಬೇಲ್ರ ಕೋಯಿಮೆ ಕಾರ್ಯಕ್ರಮವು ಸೋಮವಾರ ನಡೆಯಿತು. ಮೂರ್ನಾಡು ಪಿಯು ಕಾಲೇಜು, ಜ್ಞಾನಜ್ಯೋತಿ ಕಾಲೇಜು, ಕೊಡಗು ವಿದ್ಯಾಲಯ, ಮಾರುತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಬೇಲ್ರ ಕೋಯಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರು ಮಾತನಾಡಿ ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಕೃಷಿ ಭೂಮಿ ಉಳಿಸಬೇಕು. ಭತ್ತ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಇಡೀ ಭರತ ಖಂಡದಲ್ಲಿ ಕೊಡಗಿನ ಭೂಮಿ ಸ್ವರ್ಗದಂತಿದ್ದು, ರೈತಾಪಿ ಕೃಷಿಕರು ಭತ್ತ, ಕಾಫಿ ಸೇರಿದಂತೆ ವಿವಿಧ ಬೆಳೆಯನ್ನು ಕೃಷಿ ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಮುಂದಿನ ಜನಾಂಗಕ್ಕೆ ಭತ್ತ ಕೃಷಿ ಪರಿಚಯಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೃಷಿಯು ಆದರ್ಶ ಬದುಕಾಗಿದ್ದು, ಕೃಷಿಯಲ್ಲಿ ತೊಡಗಿಸಿಕೊಂಡವರು ಆತ್ಮ ತೃಪ್ತಿಯಿಂದ ಬದುಕು ನಡೆಸುತ್ತಾರೆ. ಕೃಷಿ ಕ್ಷೇತ್ರವು ಬದುಕಿನ ಅನುಭವವಾಗಿದೆ ಎಂದು ಮಹೇಶ್ ನಾಚಯ್ಯ ಅವರು ಅಭಿಪ್ರಾಯಪಟ್ಟರು.
ಕೃಷಿ ಭೂಮಿಯನ್ನು ಉಳಿಸಿಕೊಳ್ಳಬೇಕು. ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಪರಿವರ್ತಿಸಬಾರದು. ಕೃಷಿ ಭೂಮಿ ಅನ್ನ ನೀಡುವುದಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಭತ್ತ ಕೃಷಿ ಮಾಹಿತಿ ನೀಡುವ ಮೂಲಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಅನಾದಿಕಾಲದಿಂದಲೂ ಕೃಷಿ ಮಾಡಿಕೊಂಡು ಬರುತ್ತಿರುವ ಕೊಡಗಿನ ಜನರು, ಕೃಷಿಯೇ ಜೀವನವಾಗಿದೆ. ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಸಹ ವಿವಿಧ ಹಬ್ಬಗಳ ಸಂದರ್ಭದಲ್ಲಿ ಭತ್ತ ಕೃಷಿಯನ್ನು ಮೊದಲು ಪೂಜೆ ಮಾಡಿ ಆರಾಧಿಸುತ್ತೇವೆ. ಆದ್ದರಿಂದ ಕೃಷಿಗೆ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ನಿವೃತ್ತ ಕೃಷಿ ಅಧಿಕಾರಿ ಅಜ್ಜಿಕುಟ್ಟಿರ ಸಿ.ಗಿರೀಶ್ ಅವರು ಮಾತನಾಡಿ ಹಿಂದೆ ಎತ್ತು ಬಳಸಿ ಕೃಷಿ ಮಾಡುತ್ತಿದ್ದರು. ಈಗ ತಾಂತ್ರಿಕತೆಯಿಂದಾಗಿ ಟ್ರ್ಯಾಕ್ಟರ್, ಟಿಲ್ಲರ್ ಬಳಸಿಕೊಂಡು ಕೃಷಿ ಮಾಡುತ್ತಿದ್ದೇವೆ. ಹೊಸ ಹೊಸ ಯಂತ್ರೋಪಕರಣ ಮಾದರಿ ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಕೃಷಿಕರಾದ ಸೋಮಂಗಡ ಗಣೇಶ್ ತಿಮ್ಮಯ್ಯ ಅವರು ಮಾತನಾಡಿ 45 ವರ್ಷದಿಂದ ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಕೃಷಿಯು ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದರು.
ಕೇಚಮಡ ಧ್ರುವ್ ದೇವಯ್ಯ ಮಾತನಾಡಿ ಭತ್ತದ ಗದ್ದೆ ತಯಾರು ಮಾಡುವ ವಿಧಾನ, ಭತ್ತದ ಬೆಳೆ ನಾಟಿ ಮಾಡಿ ಉತ್ತಮ ಬೆಳೆ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಕೃಷಿಕ ಪುದಿಯೊಕ್ಕಡ ಸೂರಜ್ ಬೋಜಣ್ಣ ಅವರು ಮಾತನಾಡಿ ಆಧುನಿಕ ಕಾಲಕ್ಕೆ ತಕ್ಕಂತೆ ಕೃಷಿ ಚಟುವಟಿಕೆ ಕೈಗೊಂಡು ಉತ್ತಮ ಭತ್ತ ಇಳುವರಿ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಕನೆಕ್ಟಿಂಗ್ ಕೊಡವಾಸ್ ಅಧ್ಯಕ್ಷರಾದ ಶಾಂತೆಯಂಡ ನಿರನ್ ನಾಚಪ್ಪ ಅವರು ಮಾತನಾಡಿದರು.
ಕದ್ದನಿಯಂಡ ಶ್ರೀ ಗಣೇಶ್ ಅವರು ಕೊಡಗು ಜಿಲ್ಲೆಗೆ ಏರಿ ಕಟ್ಟುವ ಯಂತ್ರವನ್ನು ಪ್ರಥಮ ಬಾರಿಗೆ ಪರಿಚಯಿಸಿದ್ದಾರೆ. 1 ಗಂಟೆಗೆ 4 ಎಕರೆ ಭೂಮಿಯಲ್ಲಿ ಏರಿ ಕಟ್ಟಬಹುದಾಗಿದೆ. ಜಿಲ್ಲೆಯಲ್ಲಿ ಬಹು ಬೇಡಿಕೆಯ ಯಂತ್ರವಾಗಿರುವುದು ವಿಶೇಷವಾಗಿದೆ.
ಆ ದಿಸೆಯಲ್ಲಿ ಬೇಲ್ರ ಕೋಯಿಮೆ ಕಾರ್ಯಕ್ರಮದಲ್ಲಿ ಈ ಟ್ರ್ಯಾಕ್ಟರ್ ಯಂತ್ರದ ಪ್ರಯೋಜನ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದು ವಿಶೇಷವಾಗಿತ್ತು.
ಮುತ್ತಾರ್ಮುಡಿ ಗದ್ದೆಯಲ್ಲಿ ಮೊಳಕೆ ಒಡೆದ ಭತ್ತ ಬಿತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸೋಮೆಂಗಡ ಗಣೇಶ್ ತಿಮ್ಮಯ್ಯ ಮತ್ತು ಅತಿಥಿಗಳಿಗೆ ಸನ್ಮಾನಿಸಲಾಯಿತು. ಬೇಲ್ರ ಕೋಯಿಮೆ ಕಾರ್ಯಕ್ರಮದ ಸಂಚಾಲಕರಾದ ಕಂಬೆಯಂಡ ಡೀನಾ ಬೋಜಣ್ಣ, ಚೊಟ್ಟೆಯಂಡ ಎ.ಸಂಜು ಕಾವೇರಪ್ಪ, ಸದಸ್ಯರಾದ ಪುತ್ತರಿರ ಪಪ್ಪುತಿಮ್ಮಯ್ಯ, ಕೊಂಡಿಜಮ್ಮನ ಬಾಲಕೃಷ್ಣ, ಪಾನಿಕುಟ್ಟಿರ ಕುಟ್ಟಪ್ಪ, ಪೊನ್ನಿರ ಗಗನ್, ಚೆಪ್ಪುಡಿರ ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ನಾಪಂಡ ಗಣೇಶ್ ಇತರರು ಇದ್ದರು.
ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ ಸ್ವಾಗತಿಸಿದರು. ಅಜ್ಜೇಟ್ಟಿರ ವಿಕ್ರಮ್ ಮತ್ತು ಅನಿತಾ ನಿರೂಪಿಸಿದರು. ನಾಪಂಡ ಗಣೇಶ್ ವಂದಿಸಿದರು.