ಬೆಳಗಾವಿ ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ಮಿತಿ ಮೀರಿದ್ದರೆ, ಇತ್ತ ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆ ವತಿಯಿಂದ ಮಹಾರಾಷ್ಟ್ರದ ವಾಹನಗಳ ಚಾಲಕರನ್ನು ಸನ್ಮಾನಿಸಿ, ಸಿಹಿ ತಿನ್ನಿಸಿ, ಗುಲಾಬಿ ಹೂ ನೀಡಿ ಸೌಹಾರ್ದತೆ ಮೆರೆಯಲಾಗಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ವಾಹನಗಳನ್ನು ತಡೆದ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದ ಕಾರ್ಯಕರ್ತರು.
ಚಾಲಕ, ನಿರ್ವಾಹಕರನ್ನು ಗೌರವಿಸಿ, ಸಿಹಿ ನೀಡಿ, ಹೂ ನೀಡಿ ಭಾಷೆ ವಿಚಾರದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಭಾವೋದ್ವೇಕಕ್ಕೆ ಒಳಗಾಗದೆ ಶಾಂತಿ ಕಾಪಾಡುವ ಸಂದೇಶ ಸಾರಿದರು. ಈ ವೇಳೆ ಮಾತನಾಡಿದ ರಾಜಘಟ್ಟರವಿ, ಮರಾಠಿ ಬರೋದಿಲ್ಲ ಎಂಬ ಕಾರಣಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಅಗತ್ಯವಾಗಿದೆ. ಹಾಗೆದು ಇತರೆ ಚಾಲಕರನ್ನು, ನಿರ್ವಾಹಕರನ್ನು ಅವಮಾನಿಸುವುದು ಸರಿಯಲ್ಲ.
ನಾವೆಲ್ಲ ಒಕ್ಕೂಟದ ವ್ಯವಸ್ಥೆಯಲ್ಲಿ ಒಂದೇ ದೇಶದ ಮಕ್ಕಳು.. ಬಡ ಚಾಲಕ, ನಿರ್ವಾಹಕರು ಹೊಟ್ಟೆ ಪಾಡಿಗಾಗಿ ಜೀವನ ನಡೆಸುತ್ತಾರೆ.. ಅಂತವರ ಮೇಲೆ ದರ್ಪ ತೋರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಕನ್ನಡಿಗರು ಪುಂಡತನದ ಕೆಲಸ ಮಾಡುವುದಿಲ್ಲ ಎಂಬುದನ್ನು ತಮ್ಮ ರಾಜ್ಯದವರಿಗೆ ತಿಳಿಸುವಂತೆ ಹೇಳಿದರು.