ಮಡಿಕೇರಿ : ಆರೋಗ್ಯ ವಿಮೆಯ ಹಣವನ್ನು ನೀಡಲು ನಿರಾಕರಿಸಿದ ಹೆಲ್ತ್ ಇನ್ಶೂರೆನ್ಸ್ ಸಂಸ್ಥೆಗೆ ವಿಮಾ ಮೊತ್ತದ ಜೊತೆಗೆ ೩೫ ಸಾವಿರ ರೂ. ದಂಡ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಮಡಿಕೇರಿ ನಿವಾಸಿ ಜೈರಸ್ ಥಾಮಸ್ ಅಲೆಕ್ಸಾಂಡರ್ ಮತ್ತು ಅವರ ಪತ್ನಿ ಶಾಲಿನಿ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೇರ್ ಹೆಲ್ತ್ ಇನ್ಸೂರೆನ್ಸ್ ಲಿಮಿಟೆಡ್ನಲ್ಲಿ ಆರೋಗ್ಯ ವಿಮಾ ಖಾತೆ ಹೊಂದಿರು. ಇದರ ಪ್ರೀಮಿಯಂ ಮೊತ್ತ ೫ ಲಕ್ಷ ರೂ. ಗಳಾಗಿದ್ದು, ೨೦೨೩ನೇ ಇಸವಿಯಲ್ಲಿ ಶಾಲಿನಿ ಯವರಿಗೆ Benign Tumor ಕಾಯಿಲೆ ಕಾಣಿಸಿಕೊಂಡಿದ್ದುದ್ದರಿಂದ ಅವರು ಸಿ.ಟಿ. ಸ್ಕಾನ್, ರೇಡಿಯೋಲಜಿ ಹಾಗೂ ಎಂಡೋಸ್ಕೋಪಿ ಚಿಕಿತ್ಸೆಗೆ ಒಳಗಾಗಿದ್ದು ಆಸ್ಪತ್ರೆಯ ವೆಚ್ಚ ರೂ.೩,೮೧,೬೫೦ ರೂ.ಅನ್ನು ತಾವೇ ಭರಿಸಿರುತ್ತಾರೆ.
ನಂತರದಲ್ಲಿ ಆಸ್ಪತ್ರೆಯ ಚಿಕಿತ್ಸೆ ವೆಚ್ಚದ ಮೊತ್ತವನ್ನು ವಿಮೆ ಪಾಲಿಸಿಯಿಂದ ಕ್ಲೇಮ್ ಮಾಡಿಕೊಳ್ಳಲು ಇನ್ಸೂರೆನ್ಸ್ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಯಾವುದೇ ವ್ಯಕ್ತಿಯ ಈ ಪಾಲಿಸಿಯ ಪ್ರಯೋಜನ ಪಡೆಯಬೇಕಾದರೆ ಪಾಲಿಸಿ ಮಾಡಿಸಿದ ನಂತರ ಎರಡು ವರ್ಷಗಳ waiting periodನಲ್ಲಿ ಇರುತ್ತದೆ ಎಂಬ ಕಾರಣಗಳಿಂದಔ ಕ್ಲೇಮನ್ನು ನಿರಾಕರಿಸಿರುತ್ತಾರೆ. ಇದರ ಪರಿಣಾಮ ದೂರುದಾರರು ತಾವು ಮಾಡಿರುವ ಚಿಕಿತ್ಸೆ ವೆಚ್ಚವನ್ನು ಇನ್ಸೂರೆನ್ಸ್ ಕಂಪನಿಯವರಿಂದ ಕೊಡಿಸಿಕೊಡಬೇಕೆಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ವಾದ ವಿವಾದಗಳನ್ನು ಆಲಿಸಿ, ದಾಖಲಾತಿಗಳನ್ನು ಪರಿಶೀಲಿಸಿದ ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷ ಡಾ. ಸಿ. ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರು ಇನ್ಶೂರೆನ್ಸ್ ಕಂಪೆನಿಯನ್ನು ತರಾಟೆಗೆ ತೆಗೆದುಕೊಂಡರು. ಇನ್ಸೂರೆನ್ಸ್ ಕಂಪನಿಯ ವ್ಯವಸ್ಥಾಪಕರಿಗೆ ಇಂತಹ ಕಾಯಿಲೆ ಕಾಣಿಸಿಕೊಂಡಿದ್ದರೇ ವಿಮಾ ಮೊತ್ತಕ್ಕೋಸ್ಕರ ಎರಡು ವರ್ಷಗಳ ನಂತರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ದೂರುದಾರರ ಆಸ್ಪತ್ರೆಯ ಚಿಕಿತ್ಸೆ ಮೊತ್ತವಾದ ೩,೮೧,೬೫೦ ರೂಪಾಯಿ ಹಾಗೂ ಅವರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೨೫,೦೦೦ ರೂ.ಗಳು ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳಿಗೆ ರೂ.೧೦,೦೦೦ ಗಳನ್ನು ಪಾವತಿಸಬೇಕೆಂದು ಆದೇಶಿಸಿದ್ದಾರೆಂದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.
