ವಿದ್ಯಾರ್ಥಿಗಳು ಎಸ್.ಎಸ್. ಎಲ್. ಸಿ. ಪರೀಕ್ಷೆ (SSLC Exam) ಮುಗಿಸಿ ಮನೆಗೆ ಹಿಂತಿರುಗಲು ಅನುಕೂಲವಾಗುವ ಸದುದ್ದೇಶದಿಂದ ಖಾಸಗಿ ಬಸ್ ಮಾಲೀಕರೊಬ್ಬರು ತನ್ನ ಒಡೆತನದ ಬಸ್ ಅನ್ನು ಒದಗಿಸುವ ಮೂಲಕ ಪೋಷಕರ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಯಲಕ್ಷ್ಮಿ ಬಸ್ ಮಾಲಿಕರಾದ ಕಾಡೇಮಾಡ ಗೌತಮ್ ಅವರು ತಮ್ಮ ಖಾಸಗಿ ಬಸ್ ಅನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿ ಜನಮೆಚ್ಚುಗೆಗೆ ಪಾತ್ರರಾದವರಾಗಿದ್ದಾರೆ.
ಪೊನ್ನಂಪೇಟೆ ತಾಲೂಕು ತಿತಿಮತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರವಿದ್ದು, ಇಲ್ಲಿ ಪರೀಕ್ಷೆ ಬರೆದ ನಂತರ ಬಾಳೆಲೆ, ಪೊನ್ನಪಸಂತೆ, ಮಾಯಮುಡಿ ಭಾಗದ ವಿದ್ಯಾರ್ಥಿಗಳು ಮನೆಗೆ ಹಿಂತೆರಳಲು ಬಸ್ ವ್ಯವಸ್ಥೆ ಇರುವುದಿಲ್ಲ. ಇದನ್ನು ಅರಿತ ಜಯಲಕ್ಷ್ಮಿ ಬಸ್ ಮಾಲೀಕರಾದ ಕಾಡೇಮಾಡ ಗೌತಮ್ ಅವರು, ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಬೇಗ ಮನೆ ಸೇರಿ ಮುಂದಿನ ಪರೀಕ್ಷೆಗಳಿಗೆ ಸಿದ್ದತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪರೀಕ್ಷೆ ಮುಗಿದೊಡನೆ ತಿತಿಮತಿಯಿಂದ ಬಾಳೆಲೆಗೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇವರ ಈ ಸೇವೆ ಬಾಳೆಲೆ ಮತ್ತು ಪೊನ್ನಪ್ಪಸಂತೆ ಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ಸೇವೆಗೆ ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.