ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಪ್ರತಿಮೆಗೆ ಪುಷ್ಪ ನಮನ ಮಾಡಿ, ಯುವ ಸ್ಪಂದನವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನ ತಾವು ತೋಡಗಿಸಿಕೊಳ್ಳಲು ಹಾಗೂ ಗುರುತಿಸಿಕೊಳ್ಳಲು ಒಂದು ಉತ್ತಮ ಅವಕಾಶ. ಇಲ್ಲಿ ಸೇವಾ ಮನೋಭಾವ ಮಾತ್ರವಲ್ಲ ಅದರ ಆಚೆಗೂ ಸಾಕಷ್ಟು ಅವಕಾಶಗಳಿಗೆ ಇದು ಒಂದು ಉತ್ತಮ ವೇದಿಕೆಯಾಗಿದೆ. ಹಲವು ಅವಕಾಶಗಳ ಜೊತೆಗೆ ಜೀವನದ ಅನುಭವವನ್ನು ಎನ್.ಎಸ್.ಎಸ್. ನೀಡುತ್ತದೆ ಎಂದು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಸಂಯಮ, ಜೊತೆಗೆ ಸಮಾಜದಲ್ಲಿ ಹೇಗೆ ಬೆರೆಯುತ್ತಾರೆಂಬದನ್ನು ಕಲಿಸಿ ಕೊಡುತ್ತದೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತು, ಕಾನೂನು ನಿಯಮದ ಬಗ್ಗೆ ಅರಿವಿಕೆ ನೀಡುವಂತ ಬೀದಿ ನಾಟಕದಂತಹ ಸಾಮಾಜಿಕ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು. ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ. ಸಾಮಾಜಿಕ ಕೆಲಸಗಳ ಮುಖಾಂತರ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮುಂದೆಯು ಮಾಡಬೇಕೆಂದು ಸಲಹೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್.ಪ್ರೊ. ರಾಘವ ಬಿ. ಮಾತನಾಡಿ, ಎನ್.ಎಸ್.ಎಸ್ ಒಂದು ಕಾರ್ಯಕ್ರಮವಲ್ಲ ಇದೊಂದು ವೇದಿಕೆ. ಹಲವು ಉತ್ತಮ ಸೇವೆ, ಚಟುವಟಿಕೆಗೆ ವೇದಿಕೆ. ರಾಷ್ಟ್ರೀಯ ಸೇವಾಯೋಜನೆ ನಿಂತ ನೀರಲ್ಲ, ಹರಿಯುವ ನೀರು. ಸಾಕಷ್ಟು ಬದಲಾವಣೆ ಪರಿವರ್ತನೆಗೆ ಕಾರಣವಾಗುತ್ತದೆ ಎಂದರು. ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಶೈಲಶ್ರೀ, ಅಲೋಕ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕ ಲೋಹಿತ್ ಮಾಗಲುಮನೆ, ಉಪನ್ಯಾಸಕರು, ಎನ್.ಎಸ್.ಎಸ್ ಹಳೆ ಸ್ವಯಂಸೇವಕ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹಾಜರಿದ್ದರು.



