ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ವಿರುದ್ಧ ಕಾಂಗ್ರೆಸ್ ನಾಯಕರ ಟೀಕೆ, ವಾಗ್ದಾಳಿ ಮುಂದುವರೆದಿದೆ.
ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅ.12ರಂದು ರಾಜ್ಯಾದ್ಯಂತ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಲಕ್ಷಾಂತರ ಕಾರ್ಯಕರ್ತರು ಈ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗೆ ಪತ್ರಬರೆದಿದ್ದು, ಅದಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ಸಿಕ್ಕ ವಿಚಾರ ಬಹಿರಂಗವಾಗಿತ್ತು. ಇದಾದ ಬೆನ್ನಲ್ಲೇ ಮತ್ತೊಬ್ಬ ನಾಯಕ ದಿನೇಶ್ ಗುಂಡೂರಾವ್ ಆರ್ಎಸ್ಎಸ್ ವಿರುದ್ಧ ಮಾತನಾಡಿದ್ದಾರೆ. .
ಆರ್ಎಸ್ಎಸ್ ಒಂದು ಪೊಲಿಟಿಕಲ್ ಸಂಸ್ಥೆ. ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ಅಂತ ಅವರು ಏನಾದ್ರೂ ಹೇಳಿಕೊಳ್ಳಬಹುದು. ಅದು ನೇರವಾಗಿ ರಾಜಕೀಯದಲ್ಲಿ ಭಾಗಿಯಾಗಿರೋದು ಎಲ್ಲರಿಗೂ ಗೊತ್ತಿದೆ. ಸರ್ಕಾರಿ ಜಾಗವನ್ನು ಆರ್ಎಸ್ಎಸ್ ಉಪಯೋಗಿಸೋದು ಸರಿಯಲ್ಲ. ಖಾಸಗಿ ಜಾಗದಲ್ಲಿ ಬೇಕಾದರೆ ಅವರು ಚಟುವಟಿಕೆ ಮಾಡಲಿ. ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಮಾಡಕ್ಕೆ ಅವಕಾಶ ಕೊಡಬಾರದು. ಕೇಂದ್ರ ಸರ್ಕಾರ ಅಧಿಕಾರಿಗಳಿಗೆ ಆರ್ಎಸ್ಎಸ್ ಸದಸ್ಯತ್ವ ಪಡೆದುಕೊಳ್ಳುವುದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ಆರ್ಎಸ್ಎಸ್, ಬಿಜೆಪಿ, ಬಜರಂಗದಳ, ಎಬಿವಿಪಿ ಎಲ್ಲವೂ ರಾಜಕೀಯ ಸಂಸ್ಥೆಗಳು. ಸರ್ಕಾರ ಬದಲಾವಣೆ, ಸಚಿವರ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗುತ್ತವೆ. ಆರ್ಎಸ್ಎಸ್ನ ಚಟುವಟಿಕೆಗಳು ದೇಶದಲ್ಲಿ ದ್ವೇಷ ಮತ್ತು ಕೋಮುಗಲಭೆಯನ್ನು ಉಂಟುಮಾಡುತ್ತವೆ. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ತ್ಯಾಗ ಮಾಡಿಲ್ಲ. ಇವರ ಸಿದ್ಧಾಂತವೆಂದರೆ ಹಿಂದುತ್ವದ ಹೆಸರಿನಲ್ಲಿ ದ್ವೇಷ ಬಿತ್ತುವುದು. ದೇಶದ ಧ್ವಜವನ್ನೇ ಇವರು ಹಾರಿಸಲಿಲ್ಲ. ಇದೊಂದು ಫ್ಯಾಸಿಸ್ಟ್ ಸಂಸ್ಥೆ ಎಂದು ಇಡೀ ದೇಶಕ್ಕೆ ಗೊತ್ತಿದೆ ಎಂದು ಕಿಡಿಕಾರಿದರು.



