ಬೆಲೆ ಏರಿಕೆ, ಮುಸ್ಲಿಂ ಓಲೈಕೆ ಮತ್ತು ದಲಿತರ ಹಣ ಲೂಟಿ ಈ ಮೂರು ವಿಚಾರವನ್ನು ಇಟ್ಟುಕೊಂಡು, ಕರ್ನಾಟಕ ಬಿಜೆಪಿ ಘಟಕ ನಾಲ್ಕು ಹಂತಗಳ ಜನಾಕ್ರೋಶ ಯಾತ್ರೆಯನ್ನು (Janakrosh Yatra) ಮೈಸೂರಿನಲ್ಲಿ ಆರಂಭಿಸಿತು. ಇಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಿ ದಿನೇ ದಿನೇ ಒಂದಿಲ್ಲೊಂದು ಬೆಲೆ ಏರಿಕೆ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದರು.
ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ರಾಜ್ಯದ ಅಭಿವೃದ್ಧಿ ಶೂನ್ಯ ದುರಾಡಳಿತ, ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಅಲ್ಪಸಂಖ್ಯಾತರ ಹೆಸರಿನಲ್ಲಿ ಕೇವಲ ಮುಸಲ್ಮಾನರಿಗೆ ಮಾತ್ರ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣಕ್ಕೆ ಬೇಸತ್ತು ಜನಸಾಮಾನ್ಯರು ಬೀದಿಗಿಳಿದಿರುವುದು ಈ ಕಾಂಗ್ರೆಸ್ ಸರ್ಕಾರ ತೊಲಗಿಸುವವರೆಗೂ ಜನಸಾಮಾನ್ಯರಿಗೆ ನೆಮ್ಮದಿಯಿಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಾಪಕವಾಗಿ ಹೊರಬರುತ್ತಿದೆ ಎಂದರು.
ಕಾಶ್ಮೀರದಲ್ಲಿ ಮುಸಲ್ಮಾನರಿಗೆ ನ್ಯಾಯ ದೊರಕಿಸುವ ಕಾರ್ಯಕ್ಕೆ ಕೇಂದ್ರ ಸಕಾ೯ರ ಮುಂದಾಗಿತ್ತು. ದೇಶದ್ರೋಹಿಗಳನ್ನು ವಿರೋಧಿಸುವ ಪಕ್ಷ ಬಿಜೆಪಿಯಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಸಿದ್ದರಾಮಯ್ಯ ರಕ್ಷಣೆ ನೀಡುತ್ತಾರೆ. ಪರಿಶಿಷ್ಟ ಜಾತಿ – ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಸಕಾ೯ರ ವಿನಿಯೋಗ ಮಾಡದೇ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಟಿಎಂನಂತಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.
ವಿನಯ್ ಸೋಮಯ್ಯ ಸಾವಿಗೆ ಸ್ಥಳೀಯ ಶಾಸಕರೇ ಕಾರಣರಾಗಿದ್ದಾರೆ. ಶೌಚಾಲಯ ಸರಿಪಡಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದೇ ತಪ್ಪೇ? ಪೊಲೀಸರ ಮೂಲಕ ಸ್ಥಳೀಯ ಶಾಸಕರು ವಿನಯ್ ಸೋಮಯ್ಯ ಗೆ ನಿರಂತರ ಕಿರುಕುಳ ನೀಡಿ ಬಿಜೆಪಿಯ ಅಮಾಯಕ ಕಾರ್ಯಕರ್ತನ ಸಾವಿಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲೀಗ ಅಯೋಗ್ಯ ಸರ್ಕಾರ ಅಧಿಕಾರದಲ್ಲಿದೆ. ಭ್ರಷ್ಟ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಹಾಗೂ ಅಯೋಗ್ಯ, ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಜನಾಕ್ರೋಶ ಯಾತ್ರೆ ಆಯೋಜಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು.
ಬಿಜೆಪಿ ಪಕ್ಷದ ಪ್ರಮುಖರಾದ ಆರ್. ಅಶೋಕ್, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲು, ಶ್ರೀರಾಮುಲು , ಸುಜಾ ಕುಶಾಲಪ್ಪ, ಕೆ.ಜಿ.ಬೋಪಯ್ಯ, ನಾಪಂಡ ರವಿಕಾಳಪ್ಪ ಸೇರಿದಂತೆ ಅನೇಕರು ಜನಾಕ್ರೋಶ ಯಾತ್ರೆಯಲ್ಲಿ ಭಾಗಿಯಾಗಿದ್ದರು.