ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಉಗ್ರರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಭಾರತೀಯ ಸೇನೆ ಮುಂದಾಗಿದೆ. ಇದೀಗ ಭಯೋತ್ಪಾದಕರನ್ನು ಸದೆಬಡೆಯಲು ಕಾಲ ಕೂಡಿ ಬಂದಿದೆ. ಇಂದು ಉಧಂಪೂರ್ ಬಳಿ ಭದ್ರತಾ ಪಡೆಗಳು ಮತ್ತು ಉಗ್ರರ ಗುಂಪಿನ ನಡುವೆ ಘರ್ಷಣೆ ಪ್ರಾರಂಭವಾಗಿದೆ. ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ (Soldier) ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಗುರುವಾರ (ಏ.24) ಬೆಳಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ದುಡು-ಬಸಂತ್ಗಢ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಬಿಎಸ್ಎಫ್ ಯೋಧ ಝಂಟು ಅಲಿ ಶೇಖ್ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಇಂದು ಉಧಂಪುರದ ಬಸಂತ್ಗಢದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಈ ವೇಳೆ ಉಗ್ರರು ಅಡಗಿದ್ದ ಸ್ಥಳವನ್ನು ಪತ್ತೆಹಚ್ಚಿ ಸುತ್ತುವರಿಯಲು ಆರಂಭಿಸಿದಾಗ ಭೀಕರ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಯೋಧರೊಬ್ಬರು ಆರಂಭದಲ್ಲಿ ಗಂಭೀರ ಗಾಯಗೊಂಡರೂ ಕೂಡಲೇ ಅಗತ್ಯ ವೈದ್ಯಕೀಯ ನೆರವು ನೀಡಲಾಯಿತು. ಆದರೆ ಅವರು ತೀವ್ರ ಗಾಯಗೊಂಡಿದ್ದರಿಂದ ಹುತಾತ್ಮರಾದರು. ಸದ್ಯ ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ಭಾರತೀಯ ಸೇನೆ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.