ಮಡಿಕೇರಿ : ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಡಿಮೆ ತೂಕದ ಮಕ್ಕಳ ಪೋಷಕರೊಂದಿಗೆ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ (NRC madikeri) ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಭೇಟಿ ನೀಡಿ ಪೌಷ್ಟಿಕ ಪುನಶ್ಚೇತನ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.
ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ಅಂಗನವಾಡಿ ಕೇಂದ್ರದಲ್ಲಿ 0-6 ವರ್ಷದ ಮಕ್ಕಳ ತೂಕ, ಎತ್ತರ, ತೋಳಿನ ಸುತ್ತಳತೆಯನ್ನು ಪರಿಶೀಲಿಸಿ ಪೋಶನ್ ಟ್ರ್ಯಾಕರ್ Appನ ಮೂಲಕ ಮಕ್ಕಳ ಪೌಷ್ಟಿಕತಾ ಮಟ್ಟವನ್ನು ಗುರುತಿಸಿದಾಗ ಅಪೌಷ್ಟಿಕತೆ ಕಂಡು ಬಂದಲ್ಲಿ ಪೋಷಕರಿಗೆ ಅರಿವು ಮೂಡಿಸಿ ಮಕ್ಕಳನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಎನ್ಆರ್ಸಿ ಕೇಂದ್ರಕ್ಕೆ ದಾಖಲಿಸಬೇಕು. 14 ದಿನಗಳ ಪೌಷ್ಟಿಕ ಆಹಾರ, ಆರೈಕೆ, ಮತ್ತು ವೈದ್ಯಕೀಯ ಚಿಕಿತ್ಸೆಯ ಮೂಲಕ ಮಕ್ಕಳ ಪೌಷ್ಟಿಕತೆ ಮಟ್ಟವನ್ನು ಹೆಚ್ಚಿಸಿ ಮಕ್ಕಳ ಆರೋಗ್ಯವನ್ನು ಸುಧಾರಿಸಲಾಗುವುದುರಿಂದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಪೋಷಕರ ಮನವೊಲಿಸಿ ಅಪೌಷ್ಟಿಕ ಮಕ್ಕಳನ್ನು nrc ಕೇಂದ್ರಕ್ಕೆ ದಾಖಲಿಸುವ ಪ್ರಯತ್ನ ಪಡಬೇಕಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ರಿಯಾ ಪೊನ್ನಮ್ಮ, ಡಯಟಿಷಿಯನ್ ನೈನಾ , ಶುಶ್ರೂಷಕ ಅಧಿಕಾರಿ ಭಾಗ್ಯಲಕ್ಷ್ಮಿ ಹಾಜರಿದ್ದು ಎನ್ಆರ್ಸಿ ಕೇಂದ್ರದಲ್ಲಿ ದಾಖಲಾದ ಮಕ್ಕಳಿಗೆ ಬ್ಲಡ್ ಇನ್ವೆಸ್ಟಿಗೇಷನ್, ಸಿಟಿ ಸ್ಕ್ಯಾನ್, ಎಂಆರ್ಐ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಹಾಗೂ ಮಗುವಿನ ಔಷಧಿ, ಆಹಾರ, ಪೋಷಕರ ಆಹಾರ ಎಲ್ಲವನ್ನೂ ಉಚಿತವಾಗಿ ನೀಡಲಾಗುವುದು. ಇದರೊಂದಿಗೆ ಪೋಷಕರಿಗೆ ಒಂದು ದಿನಕ್ಕೆ 370 ವೇತನ ನಷ್ಟಕ್ಕಾಗಿ ನೀಡಲಾಗುವುದು. 14 ದಿನದ ನಂತರ ಮಗುವನ್ನು ನಗು ಮಗು ಯೋಜನೆ ಮೂಲಕ ಮನೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ವಿವಿಧ ಅಂಗನವಾಡಿಗಳ 30 ಮಂದಿ ರ್ಯಕರ್ತೆಯರು ಈ ಸಂದರ್ಭ ಉಪಸ್ಥಿತರಿದ್ದರು.





