ಮಡಿಕೇರಿ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಮಹಾರಾಣಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕೊಡಗು ಮೂಲದ ಶ್ರೀನಿತಿ ಪ್ರಕಾಶ್ ರೈ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಲಯನ್ಸ್ ತಂಡ 80,000 ರೂ.ಗೆ ಎಡಗೈ ಸ್ಪಿನ್ನರ್ ಶ್ರೀನಿತಿ ಅವರನ್ನು ಖರೀದಿಸಿದೆ. ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಇವರು, ಕಳೆದ ವರ್ಷ 19 ಮತ್ತು 23 ವರ್ಷದೊಳಗಿನ ತಂಡವನ್ನು ಪ್ರತಿನಿಧಿಸಿದ್ದರು. 19 ವರ್ಷದೊಳಗಿನವರ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಆರ್ಸಿಬಿ ಮಹಿಳಾ ತಂಡದ ನೆಟ್ ಬೌಲರ್ ಆಗಿಯೂ ಗುರುತಿಸಿಕೊಂಡಿದ್ದಾರೆ.
ಮಡಿಕೇರಿ ತಾಲೂಕಿನ ಹೆಮ್ಮೆತ್ತಾಳು ನಿವಾಸಿ ಬಿ.ಜಿ. ಪ್ರಕಾಶ್ ಮತ್ತು ಬಿ.ಪಿ. ವಿನುತಾ ದಂಪತಿಯ ಪುತ್ರಿ. 2022ರಿಂದೀಚೆಗೆ ಕರ್ನಾಟಕ ತಂಡವನ್ನು ಇವರು ಪ್ರತಿನಿಧಿಸುತ್ತಿದ್ದಾರೆ. ಅದೇ ವರ್ಷ ರಾಜ್ಯ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
