ಕುಶಾಲನಗರ : ಸೈಬರ್ ಪೊಲೀಸರೆಂದು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿ ಏಳು ಲಕ್ಷ ರೂಪಾಯಿ ವಂಚಿಸಿದ ನಕಲಿ ಪೊಲೀಸರ ತಂಡವೊಂದರ ಐವರು ಖತರ್ನಾಕ್ಗಳನ್ನು ಕುಶಾಲನಗರ ಟೌನ್ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ತಾಲ್ಲೂಕು ಹಾಲೇರಿ ಗ್ರಾಮದ ಇಬ್ರಾಹಿಂ ಬಾದುಷಾ(25), ಮೇಲುಕೋಟೆ ಬಳಿಘಟ್ಟ ಗ್ರಾಮದ ರಾಘವೇಂದ್ರ ಬಿ.ಎಂ.(19), ಬೆಂಗಳೂರು ಬನಶಂಕರಿಯ ಸಂಗೀತ, ಕುಶಾಲನಗರ ಆದರ್ಶ ದ್ರಾವಿಡ ಕಾಲೋನಿಯ ಚರಣ್ ಸಿ.ಕೆ.(19) ಹಾಗೂ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.
ಮಾದಾಪಟ್ಟಣ ನಿವಾಸಿ ಪರಶಿವಮೂರ್ತಿ ಎಂಬವರು 2024ನೇ ಅಕ್ಟೊಬರ್ ತಿಂಗಳಿನಲ್ಲಿ ಫೇಸ್ಬುಕ್ನಲ್ಲಿ ಯಾರೋ ಒಬ್ಬರಿಗೆ ಮೆಸೇಜ್ ಮಾಡಿದ್ದಾರೆ. ಇದಾದ ನಂತರ ಅಪರಿಚಿತ ವ್ಯಕ್ತಿ ದಿನಾಂಕ 02-11-2024 ರಂದು ಪರಶಿವಮೂರ್ತಿರವರ ಮೊಬೈಲ್ಗೆ ಕರೆ ಮಾಡಿ ತಾನು ಪಿರಿಯಾಪಟ್ಟಣ ಸೈಬರ್ ಪೊಲೀಸ್ ಎಂದು ಪರಿಚಯಿಸಿಕೊಂಡು “ನೀವು ಹುಡುಗಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್, ಕಾಮೆಂಟ್ ಮಾಡಿ ಟಾರ್ಚರ್ ನೀಡಿರುವ ಕುರಿತು ದೂರು ದಾಖಲಾಗಿರುತ್ತದೆ. ನೀವು ಹಣ ನೀಡಿದರೆ ಸರಿ ಮಾಡುತ್ತೇನೆ. ಇಲ್ಲವಾದಲ್ಲಿ ಮನೆಯ ಬಳಿ ಬಂದು ನಿನ್ನನ್ನು ಕರೆದುಕೊಂಡು ಹೋಗಿ ಜೈಲಿಗೆ ಹಾಕುತ್ತೇನೆ ಎಂದು ಬೆದರಿಸಿ ಸುಮಾರು ಏಳು ಲಕ್ಷ ರೂ. ಹಣವನ್ನು ಪಡೆದಿದ್ದ.
ಆದರೆ ಈ ಬಗ್ಗೆ ಅನುಮಾನಗೊಂಡ ಪರಶಿವಮೂರ್ತಿ 11-01-2025 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಸೋಮವಾರಪೇಟೆ ಉಪವಿಭಾಗ ಡಿಎಸ್ಪಿ ಚಂದ್ರಶೇಖರ್, ಕುಶಾಲನಗರ ವೃತ್ತ ನಿರೀಕ್ಷಕರಾದ ಬಿ.ಜಿ. ಪ್ರಕಾಶ್, ಸಬ್ ಇನ್ಸ್ಪೆಕ್ಟರ್ ಗೀತಾ ಹಾಗೂ ಸಿಬ್ಬಂದಿಯ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡಿದ್ದ ತಂಡ 24-06-2025 ರಂದು ಐವರು ಆರೋಪಿಗಳನ್ನು ಬಂಧಿಸಿದೆ.
ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಜಿಲ್ಲಾ ಎಸ್ಪಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.
