ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಕೊಡಗು ಮೂಲದ ಬಿಜೆಇಪ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ (Thennira Maheena) ಕೊನೆಗೂ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆಗೆ ಹಾಜರಾಗಲು ಬೆಂಗಳೂರಿನ ಹೆಣ್ಣೂರು ಪೊಲೀಸರು ನೊಟೀಸ್ ನೀಡಿದ್ದರು. ಅದರಂತೆ ಠಾಣೆಯ ಇನ್ಸ್ಪೆಕ್ಟರ್ ಎದುರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಕೊಡಗು ಮೂಲದ ವಿನಯ್ ಸೋಮಯ್ಯ ನವರು ಏಪ್ರಿಲ್ 4 ರಂದು ಮುಂಜಾನೆ ನಾಗವಾರದದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ವಿನಯ್ ತಮ್ಮ ಮೊಬೈಲ್ನಲ್ಲಿ ತನ್ನ ಆತ್ಮಹತ್ಯೆಗೆ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ, ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರ ಮತ್ತು ಇತರರ ಒತ್ತಡ ಕಾರಣ ಎಂದು ಸಂದೇಶ ಫಾರ್ವರ್ಡ್ ಮಾಡಿದ್ದರು. ಇದು ರಾಜಕೀಯ ತಿರುವು ಕೂಡಾ ಪಡೆದುಕೊಂಡು, ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಿತ್ತು. ಇದಾದ ನಂತರ ಹೆಣ್ಣೂರು ಠಾಣೆಯಲ್ಲಿ ತೆನ್ನಿರ ಮೈನಾ ಮತ್ತು ಇತರರ ವಿರುದ್ಧ ಮೃತ ವಿನಯ್ ಸಹೋದರ ಜೀವನ್ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿತ್ತು.