ಮಡಿಕೇರಿ : ಕಡಗದಾಳು ಮಂಡಲ ವ್ಯಾಪ್ತಿಯ ಹಿಂದು ಸಂಗಮ ಕಾರ್ಯಕ್ರಮ ಭಾನುವಾರ ವೈಭವದಿಂದ ಜರುಗಿತು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಹಿಂದುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ವರ್ಣರಂಜಿತ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ರಚಿಸಲಾಗಿದ್ದ ಶ್ರೀ ವಿನಾಯಕ ವಸತಿ ಕತ್ತಲೆಕಾಡು-ಜೇನುಕೊಲ್ಲಿ, ಶೌರ್ಯ ವಸತಿ ಕಡಗದಾಳು, ಶಿವಾಜಿ ವಸತಿ ನೀರುಕೊಲ್ಲಿ, ಪರಶುರಾಮ ವಸತಿ ಬೋಯಿಕೇರಿ ಸದಸ್ಯರುಗಳು ತಮ್ಮ ಗ್ರಾಮಗಳಿಂದ ಮೆರವಣಿಗೆ ಮೂಲಕ ಕಡಗದಾಳು ಶಾಲೆ ಆವರಣಕ್ಕೆ ಆಗಮಿಸಿದರು. ಬಳಿಕ ಸ್ಥಳೀಯ ಶಾಲೆ ಆವರಣದಿಂದ ಸಾಮೂಹಿಕ ಶೋಭಾಯಾತ್ರೆ ಆರಂಭವಾಗಿ ತುರ್ಕರಟ್ಟಿವರೆಗೆ ಸಾಗಿ ಮರಳಿ ಶಾಲೆ ಆವರಣದಲ್ಲಿ ಸಂಪನ್ನಗೊಂಡಿತು. ಭಾರತ ಮಾತೆಯ ಬೃಹತ್ ಚಿತ್ರಪಟ, ವಿವಿಧ ಕಲಾಕೃತಿಗಳು, ಭಜನೆ, ಕುಣಿತ ಭಜನೆ ತಂಡಗಳು, ಸಾಂಪ್ರದಾಯಿಕ ವಾಲಗ, ಚಂಡೆ ಮೇಳ, ಐತಿಹಾಸಿಕ ವ್ಯಕ್ತಿಗಳು, ದೇವರುಗಳ ವೇಷ ಧರಿಸಿದ ಮಕ್ಕಳು ಮೆರವಣಿಗೆಗೆ ವಿಶೇಷ ಮೆರುಗು ತುಂಬಿದರು. ಮೆರವಣಿಗೆಯಲ್ಲಿ ಹಿಂದುತ್ವದ ಪರವಾದ ಜಯಘೋಷ ಮೊಳಗಿತು. ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸಿದರು.
ಸಭಾ ಕಾರ್ಯಕ್ರಮ : ಬಳಿಕ ಕಡಗದಾಳು ಶಾಲೆ ಮೈದಾನದಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಸ್ಥಳೀಯ ಶ್ರೀ ಭಗವತಿ ದೇವಾಲಯದ ತಕ್ಕ ಮುಖ್ಯಸ್ಥ ಮುಕ್ಕಾಟಿರ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಚಿತ್ರಪಟಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು.
ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಮಂಗಳೂರಿನ ಸಾಮರಸ್ಯ ಗತಿವಿಧಿಯ ಸಹಸಂಯೋಜಕ ಶಿವಪ್ರಸಾದ್ ಉಜಿರೆ ಮಾತನಾಡಿ, ಹಿಂದುಗಳು ವಿವಿಧ ಜಾತಿಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದೇವೆ. ದೇಶದ ಮೂಲೆ ಮೂಲೆಯಲ್ಲಿ ವಿವಿಧ ಜಾತಿ, ಪಂಗಡಗಳಲ್ಲಿ ಹಲವಾರು ವೈವಿಧ್ಯಮಯ ಆಚರಣೆ ವ್ಯವಸ್ಥೆ ಇದೆ. ಬೇರೆ ಬೇರೆ ಜಾತಿಯಾಗಿದ್ದರೂ ನಾವೆಲ್ಲರೂ ಹಿಂದು ಎಂಬ ಭಾವನೆ ಎಲ್ಲರಲ್ಲೂ ನೆಲೆಸಬೇಕು. ಹಿಂದುಗಳ ಮನಸ್ಸಿನ ಜಡತ್ವವನ್ನು ಓಡಿಸುವ ಕೆಲಸ ಹಿಂದಿನಿಂದಲೂ ಆಗ್ತಿದೆ. ನಮ್ಮೊಳಗಿನ ವ್ಯತ್ಯಾಸವನ್ನು ಸರಿ ಮಾಡುವ ಕಾರ್ಯ ಆಗಬೇಕೆಂದು ಕರೆ ನೀಡಿದರು.
ಭಾರತ ಸಾಂಸ್ಕೃತಿಕವಾಗಿ ಮಾತ್ರವಲ್ಲ. ಭೂಮಿಯ ಅಂತರಾಳದಲ್ಲೂ ಹಲವು ಭಿನ್ನತೆಯನ್ನು ಹೊಂದಿದೆ. ನಮ್ಮದು ಪುರಾತನವಾದ ಶ್ರೇಷ್ಠ ದೇಶ.
ಹಿಂದು ಧರ್ಮದ ಒಳಗೆ ಹಲವು ಜಾತಿಯ ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ. ಅವರೆಲ್ಲ ನಮ್ಮ ವಿರುದ್ಧ ತಿರುಗಿ ಬಿದ್ದರೆ ಹಿಂದು ಸಮಾಜದ ರಕ್ಷಣೆ ದೊಡ್ಡ ಸವಾಲಾಗುತ್ತದೆ. ಶೋಷಣೆಯ ಪರಿಣಾಮ ಅನೇಕರು ಮತಾಂತರ ಆಗುತ್ತಿದ್ದಾರೆ. ಹಣಕ್ಕಾಗಿ ಮತಾಂತರ ಆಗುತ್ತಿದ್ದಾರೆಂಬ ಭ್ರಮೆಯಲ್ಲಿ ನಾವಿದ್ದೇವೆ. ಆದರೆ ಅಸಲಿ ಕಾರಣ ಅವರ ಮೇಲಾಗುತ್ತಿರುವ ಶೋಷಣೆ. ಹಿಂದು ಧರ್ಮದ ಒಳಗಿನ ಎಲ್ಲರಿಗೂ ಒಂದೇ ರೀತಿಯ ಗೌರವ ಸಿಗುವಂತಾದರೆ ಸಾಮಾಜಿಕವಾಗಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮ ಮಕ್ಕಳನ್ನು ನಾವು ರೋಬೋಟ್ಗಳ ರೀತಿ ಬೆಳೆಸುತ್ತಿದ್ದೇವೆ. ಶಿಕ್ಷಣದ ಹೆಸರಿನಲ್ಲಿ ಮಾನಸಿಕ ಒತ್ತಡ ಹೇರುತ್ತಿದ್ದೇವೆ. ಇದರಿಂದ ಮಕ್ಕಳು ದಿಕ್ಕು ತಪ್ಪುತ್ತಿದ್ದಾರೆ. ನಮ್ಮ ಮಕ್ಕಳು ಜೈಲಿಗೆ ಹೋಗಬೇಕಾ? ಸಂಸ್ಕಾರವಂತರಾಗಿ ಉನ್ನತ ಸ್ಥಾನಕ್ಕೆ ಏರಬೇಕಾ? ಎಂಬುದು ಪೋಷಕರ ಮನಸ್ಥಿತಿಯ ಮೇಲೆ ನಿಂತಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಮಾದೇಟಿರ ಬೆಳ್ಯಪ್ಪ ಮಾತನಾಡಿ, ಕಾರ್ಯಕ್ರಮಕ್ಕೆ ಗ್ರಾಮದ ಹಿಂದುಗಳು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ. ಇದು ಗ್ರಾಮದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಾಗಿದೆ. ಇನ್ನು ಮುಂದೆ ಪ್ರತಿಯೊಬ್ಬ ಹಿಂದುವಿಗೆ ಸಮಸ್ಯೆಯಾದಾಗ ಎಲ್ಲರೂ ಒಗ್ಗಟ್ಟಾಗಿ ಸ್ಪಂದಿಸುವ ಮನೋಭಾವ ಮೈಗೂಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಗ್ರಾಮದ ಹಿರಿಯ ಸ್ವಯಂಸೇವಕ ಕೊರವಂಡ ಮಾಚಯ್ಯ, ಮಾಜಿ ಸೈನಿಕರಾದ ಕೆಚ್ಚೆಟ್ಟಿರ ರಾಜಾ ಸೋಮಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇಬ್ನಿವಳವಾಡಿ ಶ್ರೀ ಭದ್ರಕಾಳಿ ದೇವಾಲಯದ ತಕ್ಕಮುಖ್ಯಸ್ಥರಾದ ಪೊನ್ನಚೆಟ್ಟಿರ ರಮೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆಚ್ಚೆಟ್ಟಿರ ಬಿದ್ದಯ್ಯ ವೇದಿಕೆಯಲ್ಲಿದ್ದರು.
ಲಿಶ್ಮಿತ ತಂಡದವರು ಸ್ವಾಗತ ನೃತ್ಯ ಮಾಡಿದರು. ರೋಹಿಣಿ ಚಂದ್ರಶೇಖರ್ ಸ್ವಾಗತಿಸಿದರು. ಸುಭಾಷ್ ಬಾಬು ಪ್ರಾರ್ಥಿಸಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು. ಅರುಣ್ ಕಡಗದಾಳು ಅತಿಥಿ ಪರಿಚಯ ಮಾಡಿದರು. ಶಂಭಯ್ಯ ವಂದಿಸಿದರು.




