ಮಡಿಕೇರಿ : ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನ ಮಾಡಿ ಬಂಧಿತರಾಗಿರುವ ಕಿಡಿಗೇಡಿಗಳು ಮಡಿಕೇರಿ ನಗರ ಬಿಜೆಪಿ ಮುಖಂಡರ ಚೇಲಾಗಳು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಗಂಭೀರ ಆರೋಪ ಮಾಡಿದ್ದಾರೆ.
ಮಡಿಕೇರಿಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಅನಧಿಕೃತ ಮಳಿಗೆಗಳನ್ನು ಮಡಿಕೇರಿ ಬಿಜೆಪಿ ಮುಖಂಡರ ಬಹಿರಂಗ ಕುಮ್ಮಕ್ಕಿನಿಂದ ನಡೆಸುತ್ತಿರುವ ವ್ಯಕ್ತಿಯ ಸಿಬ್ಬಂದಿ ಅತ್ಯಂತ ಕೀಳಾಗಿ ನಿಂದಿಸಿ ವಿಡಿಯೋ ಹರಿಯಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಪೋಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ಷಿಪ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದರಿ ಆರೋಪಿಗಳು ಮಡಿಕೇರಿ ಬಿಜೆಪಿ ಮುಖಂಡರ ಚೇಲಾಗಳಾಗಿದ್ದು, ಅವರ ಕೃಪಾಕಟಾಕ್ಷದಿಂದಲೇ ಇಂತಹ ದುಷ್ಕೃತ್ಯ ಎಸಗಿದ್ದಾರೆ. ಹಾಗಾಗಿ ಕೊಡಗು ಬಿಜೆಪಿ ಸಾರ್ವಜನಿಕವಾಗಿ ಜನರ ಕ್ಷಮೆಯಾಚಿಸಲಿ ಎಂದು ತೆನ್ನಿರ ಮೈನಾ ಒತ್ತಾಯಿಸಿದ್ದಾರೆ.
ಕೆ.ಎಸ್.ಆರ್. ಟಿ. ಸಿ ಡಿಪೋ ಮುಂಭಾಗದಲ್ಲಿರುವ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲು ನಗರ ಸಭೆ ಸೂಚನೆ ನೀಡಿದ್ದರೂ ಬಿಜೆಪಿಯ ಕೆಲವು ನಗರ ಸಭಾ ಸದಸ್ಯರು ಅಕ್ರಮ ಮಳಿಗೆಯ ಪರ ನಿಂತು ನಗರ ಸಭೆ ಸಾಮಾನ್ಯ ಸಭೆಯಲ್ಲಿ ತಾವು ವಾಮಮಾರ್ಗಿಗಳು ಎಂಬುದನ್ನು ಪ್ರದರ್ಶನ ಮಾಡಿದ್ದರು. ಇಂತಹ ಬಿಜೆಪಿ ನಾಯಕರು ತಮ್ಮ ಚೇಲಾಗಳಿಗೆ ಅಪರಾಧ ಎಸಗಲು ಪರೋಕ್ಷವಾಗಿ ಕುಮ್ಮಕ್ಕು ನೀಡಿರುವ ಸಾಧ್ಯತೆ ಇದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಗುವುದು ಎಂದು ತೆನ್ನಿರ ಮೈನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



