ಪೊನ್ನಂಪೇಟೆ: ಕ್ರೀಡಾ ಚಟುವಟಿಕೆಗಳ ಆಯೋಜನೆ ಮತ್ತು ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕೆ ಮಾತ್ರ ಸೀಮಿತಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ಇದೇ ತಿಂಗಳ 11ರಂದು ಗುರುವಾರ ಉದ್ಘಾಟನೆಗೊಳ್ಳಲಿದೆ. ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲೆಯೊಂದಕ್ಕೆ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸುವ ಮೂಲಕ ಕೆ.ಎಂ.ಎಸ್.ಎ.ಯನ್ನು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರಾದ ಆಲೀರ ರಶೀದ್ ತಿಳಿಸಿದ್ದಾರೆ.
ಈ ಕುರಿತು ವಿರಾಜಪೇಟೆಯಲ್ಲಿ ನಡೆದ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಅಕಾಡೆಮಿಯನ್ನು ಮಾದರಿ ಕ್ರೀಡಾ ಸಂಘಟನೆಯಾಗಿ ಮುನ್ನೆಡೆಸುವ ಉದ್ದೇಶದಿಂದಾಗಿ ಇದನ್ನು ಅರ್ಥಪೂರ್ಣವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೆ.ಎಂ.ಎಸ್.ಎ. ಪೂರ್ಣರೂಪದ ಕ್ರೀಡಾ ಸಂಸ್ಥೆಯಾಗಿರುವುದರಿಂದ ಇದನ್ನು ಸಾಮಾನ್ಯ ರೀತಿಯಲ್ಲಿ ಉದ್ಘಾಟಿಸುವ ಬದಲು ಬೇರೆ ಬೇರೆ ಕಾರಣಗಳಿಂದ ಕ್ರೀಡಾ ಪರಿಕರಗಳ ಕೊರತೆ ಎದುರಿಸುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸುವುದರ ಮೂಲಕ ಅಕಾಡೆಮಿಯನ್ನು ಅರ್ಥಪೂರ್ಣವಾಗಿ ಉದ್ಘಾಟಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ರಶೀದ್ ಅವರು ಮಾಹಿತಿ ನೀಡಿದರು.
ಸಭೆಯಲ್ಲಿದ್ದ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್ ಮಾತನಾಡಿ, ಅಂದು ಬೆಳಿಗ್ಗೆ 10:00 ಗಂಟೆಗೆ ಅಕಾಡೆಮಿ ಅಧ್ಯಕ್ಷರಾದ ಆಲೀರ ರಶೀದ್ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಕ್ಕಬ್ಬೆ ಗ್ರಾ. ಪಂ. ಅಧ್ಯಕ್ಷರಾದ ಶಿಲ್ಪಾ ಲೋಕೇಶ್, ಸದಸ್ಯರಾದ ಕಲಿಯಂಡ ಸಂಪನ್ ಅಯ್ಯಪ್ಪ, ಹೊದ್ದೂರು ಗ್ರಾ. ಪಂ. ಅಧ್ಯಕ್ಷರಾದ ಹೆಚ್. ಎ. ಹಂಸ, ಜಿಲ್ಲಾ ಕೆ. ಡಿ. ಪಿ. ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಅಕಾಡೆಮಿಯ ಉಪಾಧ್ಯಕ್ಷರಾದ ಕೇಂಗೋಟಂಡ ಎಸ್. ಸೂಫಿ, ಕುಂಡಂಡ ಎ. ರಜ್ಹಾಕ್, ಕ್ರೀಡಾ ಸಂಚಾಲಕರಾದ ಕತ್ತಣಿರ ಹೆಚ್. ಅಬ್ದುಲ್ ರಹಿಮಾನ್ (ಅಂದಾಯಿ), ಜಂಟಿ ಕಾರ್ಯದರ್ಶಿ ಕಣ್ಣಪ್ಪಣೆ ವೈ. ಅಶ್ರಫ್, ನಿರ್ದೇಶಕರಾದ ಆಲೀರ ಎ. ಹುಸೈನ್, ಪುಂಜೆರ ಹೆಚ್. ಅಬ್ದುಲ್ಲ, ಕುಪ್ಪೋಡಂಡ ಮಹಮ್ಮದ್, ಮಂದಮಾಡ ರಫೀಕ್ (ಮುನ್ನ) ಅಕ್ಕಳತಂಡ ಎ. ಶಫೀಕ್ ಮತ್ತು ಪರವಂಡ ಎ. ಸಿರಾಜುದ್ದೀನ್ ಉಪಸ್ಥಿತರಿದ್ದರು.



