ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ. ವೆಬ್ಸೈಟ್ನಲ್ಲಿಯೂ ಫಲಿತಾಂಶ ಲಭ್ಯವಿದೆ. ಉಡುಪಿ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನ ಪಡೆದರೆ ಕೊಡಗು ಜಿಲ್ಲೆ 4ನೇ ಸ್ಥಾನ (ಶೇ.83.84) ಹಾಗೂ ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಮಧ್ಯಾಹ್ನ 12.30 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಬಿಡುಗಡೆ ಮಾಡಿದ್ದಾರೆ. karresults.nic.in ಹಾಗೂ kseab.karnataka.gov.in ಈ ಎರಡು ವೆಬ್ಸೈಟ್ಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಲಭ್ಯವಿರಲಿದೆ. ಮಾರ್ಚ್ 1ರಿಂದ 20ರವರೆಗೆ ನಡೆದ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಉಡುಪಿ ಮೊದಲ ಸ್ಥಾನ(ಶೇ.93.90 )ಗಳಿಸಿದ್ದು, ಯಾದಗಿರಿ(ಶೇ.48.45) ಕೊನೆಯ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ(93.57) ದ್ವಿತೀಯ ಸ್ಥಾನ ಗಳಿಸಿದೆ. ಬೆಂಗಳೂರು ದಕ್ಷಿಣ 3ನೇ ಸ್ಥಾನ(ಶೇ.85.36), ಕೊಡಗು 4ನೇ ಸ್ಥಾನ (ಶೇ.83.84) ಮತ್ತು ಬೆಂಗಳೂರು ಉತ್ತರ 5ನೇ ಸ್ಥಾನ (ಶೇ.83.31) ಗಳಿಸಿದೆ. ಕಲಾ ವಿಭಾಗ ಸಂಜನಾ ಬಾಯಿ ಮೊದಲ ರ್ಯಾಂಕ್ ಪಡೆದಿದ್ದಾರೆ. 600ಕ್ಕೆ ಸಂಜನಾ ಬಾಯ್ 597 ಅಂಕ ಪಡೆದಿದ್ದಾರೆ. ಸಂಜನಾ ಬಳ್ಳಾರಿ ಮೂಲದವರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದಿದ್ದಾರೆ.
ಈ ಬಾರಿಯು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 3,45,694 ಬಾಲಕಿಯರು ಹಾಜರಾಗಿದ್ದರು. ಈ ಪೈಕಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇಕಡಾ 77.88ರಷ್ಟು ಬಾಲಕಿಯರು ಉತ್ತೀರ್ಣರಾದಂತಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 2,92,111 ಬಾಲಕರು ಹಾಜರಾಗಿದ್ದರು. ಈ ಪೈಕಿ 1,99,227 ಬಾಲಕರು ಉತ್ತೀರ್ಣರಾಗಿದ್ದಾರೆ.



